News Karnataka Kannada
Saturday, May 04 2024
ರಾಮನಗರ

ರಾಮನಗರದಲ್ಲಿ ಸಿಡಿಲು ಮಳೆಗೆ ಭಾರೀ ಹಾನಿ

Rama
Photo Credit :

ರಾಮನಗರ: ತಾಲೂಕಿನಲ್ಲಿ ಸಿಡಿಲು, ಗುಡುಗು ಸಹಿತ ಸುರಿದ ಭಾರಿ ಮಳೆಗೆ ಬಿಡದಿ ಹೋಬಳಿ ಬೆತ್ತಂಗೆರೆ ಗ್ರಾಮದಲ್ಲಿ ಮರವೊಂದರ ಕೆಳಗೆ ನಿಂತಿದ್ದ 16 ಕುರಿ ಮತ್ತು ಮೇಕೆಗಳು ಸಿಡಿಲು ಬಡಿದು ಸಾವನ್ನಪ್ಪಿದ್ದರೆ, ಇನ್ನು ಕೆಲವು ಕಡೆ ಮನೆಯ ಛಾವಣಿ ಹಾರಿ ಹೋಗಿದ್ದು, ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು ಭಾರೀ ನಷ್ಟವಾಗಿದೆ.

ಬಿಡದಿ ಹೋಬಳಿ ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯ ಬೆತ್ತಂಗೆರೆ ಗ್ರಾಮದಲ್ಲಿ  ಮಳೆ ಕಾರಣ ರೈತರು ತಮ್ಮ ಕುರಿ, ಮೇಕೆಗಳನ್ನು  ಮರವೊಂದರ ಕೆಳಗೆ ಕಟ್ಟಿದ್ದರು. ತಾವೆಲ್ಲ ಮತ್ತೊಂದು ಮರದ ಕೆಳಗೆ ಆಶ್ರಯ ಪಡೆದಿದ್ದರು. ಸಿಡಿಲು ಅಪ್ಪಳಿಸಿದ ಪರಿಣಾಮ ಕುರಿ ಮತ್ತು ಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಸಮೀಪದ ಮರದ ಕೆಳಗೆ ನಿಂತಿದ್ದ ಮೂರು ಮಂದಿ ರೈತರು ಅದೃಷ್ಠವಶಾತ್ ದುರಂತದಿಂದ ಪಾರಾಗಿದ್ದಾರೆ.

ಕುರಿ, ಮೇಕೆಗಳನ್ನು ಪಾಲನೆ ಮಾಡುತ್ತಿದ್ದ ಬಡಕುಟುಂಬಗಳಿಗೆ ಅಂದಾಜು 2 ಲಕ್ಷ ರೂ ನಷ್ಟ ಉಂಟಾಗಿದೆ. ವಿಷಯ ತಿಳಿದ ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷೆ ಸುಮತಿ ನಾಗರಾಜು ಮತ್ತು ಉಪಾಧ್ಯಕ್ಷ ರೇವಣಸಿದ್ದಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಣಕಲ್ ಪಶು ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಕಂದಾಯ ಇಲಾಖೆ ರಾಜಸ್ವನಿರೀಕ್ಷರು ಸ್ಥಳದಲ್ಲಿ ಹಾಜರಿದ್ದರು.

ಬಿಡದಿ ಹೋಬಳಿ ಭೈರಮಂಗಲ ಗ್ರಾಪಂ ವ್ಯಾಪ್ತಿಯ ಕೋಡಿಪುರ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಸಿಲುಕಿ ಐಯಲಗಯ್ಯ ಎಂಬುವರಿಗೆ ಸೇರಿದ ರೇಷ್ಮೆ ಸಾಕಣೆ ಮನೆಯ ಚಾವಣಿ ಹಾರಿಹೋಗಿದೆ. ಏಕಾಏಕಿ ಬೀಸಿದ ಬಿರುಗಾಳಿ ರಭಸಕ್ಕೆ ರೇಷ್ಮೆ ಸಾಕಣೆ ಮನೆಯ ಚಾವಣಿಗೆ ಅಳವಡಿಸಿದ್ದ ಶೀಟ್‌ಗಳು ಸಂಪೂರ್ಣ ಹಾರಿಹೋಗಿದ್ದು ಮನೆ ಬೋಳು ಬೋಳಾಗಿದೆ. ಇದರಿಂದ ಸಾವಿರಾರು ನಷ್ಟ ಸಂಭವಿಸಿದೆ ಎಂದು ರೈತ ಐಯಲಗಯ್ಯ ಅಳಲು ತೋಡಿಕೊಂಡಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕೂನಮುದ್ದನಹಳ್ಳಿ ಕ್ರಾಸ್ ಬಳಿ ಮಾಗಡಿ ರಸ್ತೆಯಲ್ಲಿ ಭಾರಿ ಮರ ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ.ಭಾನುವಾರ ಸಂಜೆ ಸುರಿದ ಮಿಂಚು, ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಗೆ ರಾಮನಗರ-ಮಾಗಡಿ ರಸ್ತೆಯ ಕೂನಮುದ್ದನಹಳ್ಳಿ ಕ್ರಾಸ್ ಬಳಿ ಅರಳಿ ಮರವೊಂದು ಧರೆಗೆ ಉರುಳಿದೆ. ಮರದ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಗಳು ಎಳೆದುಕೊಂಡಿದೆ. ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಸಹ ಮುರಿದು ರಸ್ತೆಗೆ ಉರುಳಿ ಬಿದ್ದಿವೆ.

ಬಿಡದಿ ಹೋಬಳಿಯ ಭೈರಮಂಗಲ ಹೊಸೂರು ಸುತ್ತಮುತ್ತಲ ಪ್ರದೇಶದಲ್ಲಿ ಬಿರುಗಾಳಿ ಸಹಿತ ಅಲಿಕಲ್ಲು ಮಳೆ ಸುರಿದಿದ್ದು, ಮಳೆ ಗಾಳಿಯ ರಭಸಕ್ಕೆ ಪಾಲ್‌ಹೌಸ್‌ಗಳು ಹಾಗೂ ಮಾವು ಬೆಳೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ ಕೆಲವು ಕಡೆ ಬೆಳೆದು ನಿಂತಿದ್ದ ಬಾಳೆ ಬೆಳೆ ನೆಲಕ್ಕುರುಳಿದೆ. ಗಾಳಿ ಮಳೆಗೆ ಮಾವು ಬೆಳೆ ಉದುರಿದ್ದು ರೈತರಿಗೆ ಭಾರಿ ನಷ್ಟ ಉಂಟಾಗಿದೆ.

ಮಿಂಚು, ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸುರಿದ ಪರಿಣಾಮ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗಿತ್ತು. ಮಳೆ ನಿಂತ ನಂತರ ಅಲ್ಲಲ್ಲಿ ನಿಲ್ಲಿಸಿದ್ದ ವಾಹನಗಳು ಒಟ್ಟಿಗೆ ರಸ್ತೆಗಿಳಿದಾಗ ಸಂಚಾರ ದಟ್ಟಣೆ ಹೆಚ್ಚಾಯಿತು. ಕೆಲವು ಕಡೆ ವಾಹನಗಳ ಸಂಚಾರ ಅಸ್ತವ್ಯಸ್ತವಾದ ಪ್ರಸಂಗವೂ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು