ಗೋಣಿಕೊಪ್ಪ: ಭಕ್ತಿ ಪ್ರೊಡಕ್ಷನ್ಸ್ ನಿರ್ಮಾಣದ “ತೇಂಬಾಡ್” ಕೊಡವ ಚಲನಚಿತ್ರ ಮೇ 19 ರಂದು ಗೋಣಿಕೊಪ್ಪದಲ್ಲಿ ಬಿಡುಗಡೆಯಾಗಲಿದ್ದು, ಇದು ಒಗ್ಗಟ್ಟನ್ನು ತಿರುಳಾಗಿಸಿಕೊಂಡು ಹೆಣೆಯಲಾದ ಸಾಂಸಾರಿಕ ಕಥಾ ಹಂದರದ ಚಿತ್ರವಾಗಿರುವುದರಿಂದ ಎಲ್ಲರ ಗಮನಸೆಳೆಯಬಹುದೆಂಬ ನಿರೀಕ್ಷೆ ಮಾಡಲಾಗುತ್ತಿದೆ.
ಗೋಣಿಕೊಪ್ಪದ ದುರ್ಗಾ ಬೋಜಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಚಿತ್ರ ಬಿಡುಗಡೆಯಾಗಲಿದ್ದು, ಮೇ 20 ರವರೆಗೆ ಪ್ರತಿದಿನ ಬೆಳಗ್ಗೆ 11 ಗಂಟೆಗೆ, ಮಧ್ಯಾಹ್ನ 2.30 ಹಾಗೂ ಸಂಜೆ 5.30 ಗಂಟೆಗೆ ಮೂರು ಪ್ರದರ್ಶನವಿರುತ್ತದೆ. ನಂತರದ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ.
ರಚನಾ ಮೈಸೂರ್ “ತೇಂಬಾಡ್” ಚಿತ್ರದ ನಿರ್ಮಾಪಕರಾಗಿದ್ದು, ತಡಿಯಂಗಡ ಗಾನ ಸೋಮಣ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ತಡಿಯಂಗಡ ಸೋಮಣ್ಣ ಹಾಗೂ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಸಹ ನಿರ್ಮಾಪಕರಾಗಿದ್ದಾರೆ. ಸಹಾಯಕ ನಿರ್ದೇಶಕರಾಗಿ ಮಾತಂಡ ದೇಚಮ್ಮ ಅಚ್ಚಯ್ಯ ಹಾಗೂ ಚಮ್ಮಟೀರ ಹೃಷಿ ಪಾರ್ವತಿ ಕೆಲಸ ಮಾಡಿದ್ದಾರೆ.
ತಡಿಯಂಗಡ ಗಾನ ಸೋಮಣ್ಣ ಕಥೆಗೆ ಮುಕ್ಕಾಟೀರ ಮೌನಿ ನಾಣಯ್ಯ ಹಾಗೂ ನೂರೇರ ಸರಿತಾ ಉತ್ತಯ್ಯ ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮುಕ್ಕಾಟೀರ ಮೌನಿ ನಾಣಯ್ಯ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ವಿನಯ್ ರಂಗದೂಳ್ ಹಾಗೂ ಮನು ರಾವ್ ಸಂಗೀತ ನೀಡಿದ್ದಾರೆ. ಮುಕ್ಕಾಟಿರ ಮೌನಿ ನಾಣಯ್ಯ ಸಾಹಿತ್ಯದ ಮೂರು ಹಾಡುಗಳಿದ್ದು, ಕೊದಿರ ಕೂತ್ ಹಾಡನ್ನು ಸಣ್ಣುವಂಡ ನಿಷ್ಮ ರಕ್ಷಕ್ ಹಾಗೂ ಇನ್ನೆರಡು ಹಾಡುಗಳನ್ನು ಕನ್ನಡ ಕೋಗಿಲೆ ಖ್ಯಾತಿಯ ರಕ್ಷಿತ್ ಪಾಣತ್ತಲೆ ಹಾಡಿದ್ದಾರೆ.
ಕೊಡಗಿನ ಸುಂದರ ಪರಿಸರದಲ್ಲಿ “ಅಪ್ ಟೌನ್” ಛಾಯಾಗ್ರಹಣದ ತಂಡ ಈ ಚಿತ್ರವನ್ನು ಚಿತ್ರೀಕರಿಸಿದ್ದು, ಸಂಕಲಕಾರರಾಗಿ ಜಫ್ಸನ್ ಪಿಂಟೋ ಚಿತ್ರಕ್ಕೆ ಜೀವ ತುಂಬಿದ್ದಾರೆ. ಪ್ರೊಡಕ್ಷನ್ ವಿಭಾಗದಲ್ಲಿ ಸೋಮಣ್ಣ, ಚೇಂದಿರ ಸೂರಜ್, ನೆರವಂಡ ಉಮೇಶ್ ಕಾರ್ಯ ನಿರ್ವಹಿಸಿದ್ದಾರೆ.
ನಾಗಿಣಿ ಕನ್ನಡ ಧಾರವಾಹಿ ಖ್ಯಾತಿಯ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಕಲಾವಿದರಾದ ವಾಂಚೀರ ನಾಣಯ್ಯ, ಪುಗ್ಗೆರ ವಿಶು, ಆಂಡಮಾಡ ಪವನ್, ಪುಳ್ಳಂಗಡ ಶರಣು ಬೆಳ್ಳಿಯಪ್ಪ, ಮಾದೆಯಂಡ ಸಂಪಿ, ನಂದಿನೆರವಂಡ ಅನೂಪ್ ಬೋಪಣ್ಣ, ನಂದಿನೆರವಂಡ ಆಕಾಶ್ ಪೆಮ್ಮಯ್ಯ, ನಂದಿನೆರವಂಡ ಶರತ್ ಮೇದಪ್ಪ, ಬೊಪ್ಪಂಡ ತಾರ, ನಾಳಿಯಂಡ ಶಾಂತಿ, ಚೆನ್ನಪ್ಪಂಡ ಕಲ್ಪನ, ನೆಲ್ಲಚಂಡ ರಿಷಿ, ಮುಕ್ಕಾಟಿರ ಮಂಜು, ಕಟ್ಟೇರ ವಿದ್ಯಾ ಅಯ್ಯಪ್ಪ, ಮುಕ್ಕಾಟಿರ ಮೌನ ಬೋಪಣ್ಣ, ಮುಂಡಚಾಡಿರ ರಿನ್ನಿ ಭರತ್, ನೂರೇರ ಪ್ರಜ್ಞಾ ಪೂವಯ್ಯ, ನೂರೆರ ನಿರನ್ ಉತ್ತಯ್ಯ, ತಡಿಯಂಗಡ ಆನ್ಯ ಸೋಮಣ್ಣ, ಬಿದ್ದಂಡ ಇಹಾನಿ ದೇವಯ್ಯ, ಚೋಳಂಡ ದೇಶ್ನಾ ದೇಚಮ್ಮ ಮೊದಲಾದ ಕಲಾವಿದರು ನಟಿಸಿದ್ದಾರೆ.