ಗುಂಡ್ಲುಪೇಟೆ: ತಾಲ್ಲೂಕಿನಲ್ಲಿರುವ ಸ್ಕಂದಗಿರಿ ಪಾರ್ವತಾಂಭೆ ಜಾತ್ರೆಯಲ್ಲಿ ರಥಕ್ಕೆ ಸಿಲುಕಿ ಸಾವನ್ನಪ್ಪಿದ ಕಂದೇಗಾಲ ಗ್ರಾಮದ ಸರ್ಪಭೂಷಣ ಹಾಗೂ ಕಬ್ಬಹಳ್ಳಿ ಗ್ರಾಮದ ಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆಯನ್ನು ನೀಡಲಾಗಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಡರಾತ್ರಿ ವರೆಗೂ ಮೃತರ ಕುಟುಂಬಕ್ಕೆ ಸರ್ಕಾರ ಇಪ್ಪತ್ತು ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ರೈತಸಂಘ ಹಾಗೂ ಕೆಲವು ಮುಖಂಡರು ಪ್ರತಿಭಟನೆ ನಡೆಸಿದರು. ಹೀಗಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಥಳಕ್ಕೆ ಭೇಟಿ ನೀಡಿ ಐದು ಲಕ್ಷ ನೀಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನೆ ನಿರತರು ಹೆಚ್ಚಿನ ಪರಿಹಾರಕ್ಕೆ ಪಟ್ಟು ಹಿಡಿದರು. ನಂತರ ದೂರವಾಣಿ ಮೂಲಕ ಮಾತನಾಡಿದ ಉಸ್ತುವಾರಿ ಸಚಿವ ವಿ ಸೋಮಣ್ಣ ಸರ್ಕಾರದಿಂದ ತಲಾ ಐದು ಲಕ್ಷ ಹಾಗೂ ಹೆಚ್ಚುವರಿಯಾಗಿ ತಲಾ ಐದು ಲಕ್ಷ ಮೃತಪಟ್ಟವರಿಗೆ ತಲಾ ಒಟ್ಟು ಹತ್ತು ಲಕ್ಷ ಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಗುಂಡ್ಲುಪೇಟೆ ತಾಲ್ಲೂಕಿನ ಪಾರ್ವತಿ ಬೆಟ್ಟದಲ್ಲಿ ಭಾನುವಾರ ನಡೆದ ರಥೋತ್ಸವ ವೇಳೆ ಕಂದೇಗಾಲದ ಸರ್ಪಭೂಷಣ ಮತ್ತು ಕಬ್ಬಹಳ್ಳಿ ಗ್ರಾಮದ ಸ್ವಾಮಿ ಎಂಬಿಬ್ಬರು ರಥದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿ, ಶಿಂಡನಪುರ ಮಲ್ಲಿಕಾರ್ಜುನ, ಕೊಡಸೋಗೆ ಗ್ರಾಮದ ಕರಿನಾಯಕ ಗಾಯಗೊಂಡಿದ್ದರು.
ಜಾತ್ರೆಯಲ್ಲಿ ರಥ ಎಳೆಯುವ ಸಂದರ್ಭದಲ್ಲಿ ರಥದ ಸುತ್ತಮುತ್ತ ಕಿಕ್ಕಿರಿದು ಭಕ್ತರು ಸೇರಿದ್ದರಿಂದ ಜೋರಾಗಿ ರಥ ಎಳೆಯಲಾಗಿದ್ದು, ಈ ವೇಳೆ ಒಬ್ಬರಿಗೊಬ್ಬರು ಕಾಲ್ತುಳಿತವಾಗಿ ಕೆಳಕ್ಕೆ ಬಿದ್ದ ಪರಿಣಾಮ ರಥದ ಚಕ್ರ ಹರಿದು ಕಂದೇಗಾಲ ಗ್ರಾಮದ ಸರ್ಪಭೂಷಣ ಮತ್ತು ಸ್ವಾಮಿ ಗಂಭೀರ ಗಾಯಗೊಂಡರು. ಈ ಪೈಕಿ ಸರ್ಪಭೂಷಣ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿ ಸಾವಿಗೀಡಾಗಿದ್ದರೆ, ಕಬ್ಬಹಳ್ಳಿ ಸ್ವಾಮಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು ಅಲ್ಲದೆ, ಮಲ್ಲಿಕಾರ್ಜುನ, ಕರಿನಾಯಕ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.