ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾನವೀಯತೆ ಮರೆತು ಕರುಣೆ ಇಲ್ಲದೆ ರಾತ್ರೋರಾತ್ರಿ ಪ್ರಾಧಿಕಾರದ ವಸತಿ ಗೃಹದಲ್ಲಿದ್ದ ಕುಟುಂಬವನ್ನು ಖಾಲಿ ಮಾಡಿಸಿರುವುದು ಬೆಳಕಿಗೆ ಬಂದಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದಲ್ಲಿ ಅನುಕಂಪ ಆಧಾರ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಜಯಸ್ವಾಮಿ ರವರು ಅಕಾಲಿಕ ನಿಧನಕ್ಕೆ ತುತ್ತಾದರು. ಆದರೆ ಜಯಸ್ವಾಮಿ ನಿಧನದ ಬಳಿಕ ಆತ ವಾಸಿಸುತ್ತಿದ್ದ ಪ್ರಾಧಿಕಾರದ ವಸತಿ ಗೃಹವನ್ನು ಕುಟುಂಬದವರು ಖಾಲಿ ಮಾಡಿರಲಿಲ್ಲ. ಈ ಸಂಬಂಧ ತೆರವುಗೊಳಿಸುವಂತೆ ಪ್ರಾಧಿಕಾರದಿಂದ ನೊಟೀಸ್ ನೀಡಿದ್ದರೂ ಮನೆ ಖಾಲಿ ಮಾಡಿರಲಿಲ್ಲ.
ಇದನ್ನು ಗಂಭೀರವಾಗಿ ಗಮನಿಸಿದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ರವರು ಸಿಬ್ಬಂದಿಗಳ ಮೂಲಕ ಜಯಸ್ವಾಮಿ ರವರ ಮನೆಯೊಳಗೆ ಪ್ರವೇಶಿಸಿ ಅಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನು ರಸ್ತೆಯಲ್ಲಿ ಇಟ್ಟು ಮಾನವೀಯತೆ ಮೌಲ್ಯಗಳನ್ನು ಹರಾಜು ಹಾಕಿದಂತೆ ನಡೆದುಕೊಂಡಿದ್ದಾರೆ.
ಮನೆಯನ್ನು ಖಾಲಿ ಮಾಡಿಸುವ ನೆಪದಲ್ಲಿ ಕರುಣೆ ಮತ್ತು ಸೇವೆಗೆ ಹೆಸರುವಾಸಿಯಾಗಿರುವ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಕುರುಣೆ ಇಲ್ಲದಂತೆ ನಡೆದುಕೊಂಡಿರುವ ಪ್ರಾಧಿಕಾರದ ಅಧಿಕಾರಿಗಳ ಕ್ರಮವನ್ನು ಸಾರ್ವಜನಿಕ ವಲಯದಲ್ಲಿ ಟೀಕಿಸಲಾಗುತ್ತಿದೆ.
ರಾತ್ರಿಯ ವೇಳೆ ಅದು ಮರುದಿನ ವೀಕೆಂಡ್ ಕರ್ಫ್ಯೂ ಇದೆ ಎಂದು ತಿಳಿದಿದ್ದರೂ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾವೀಯತೆಯನ್ನು ಮರೆತು ನಡೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಈಗ ಕೇಳಿ ಬರುತ್ತಿರುವ ಪ್ರಶ್ನೆಯಾಗಿದೆ. ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ 35 ವರ್ಷಗಳ ಸೇವೆ ಮಾಡಿದ ನೌಕರನ ಕುಟುಂಬವನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳಬಾರದಿತ್ತು ಎಂಬುದು ಜನರ ಅನಿಸಿಕೆಯಾಗಿದೆ.