ಚಾಮರಾಜನಗರ: ಕಳೆದ ಕೆಲವು ತಿಂಗಳ ಹಿಂದೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರಿಂದ ಶಿಫಾರಸ್ಸು ಮಾಡಿಸಲು ಮುಂದಾಗಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಸಿದ್ದರಾಜು ಬಂಧಿತ ಆರೋಪಿ. ಈತ ಕಳೆದ ಕೆಲವು ತಿಂಗಳುಗಳಿಂದ ಪೊಲಿಸರಿಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದನು. ಈತನ ಮೇಲೆ ಜಾತಿನಿಂದನೆ, ಗುಂಪು ಹಲ್ಲೆ, ಸರ್ಕಾರದ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.
ಕಳೆದ ಕೆಲವು ತಿಂಗಳ ಹಿಂದೆ ಸಿದ್ದರಾಜು ಮೇಲೆ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬಂಧಿಸಲು ತೆರಳಿದ್ದ ಬೇಗೂರು ಪಿಎಸ್ಐ, ಎಎಸ್ಐ, ಮೂವರು ಪೇದೆಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆತ ಬಳಿಕ ನೇರವಾಗಿ ಮೇಕೆದಾಟು ಪಾದಯಾತ್ರೆಗೆ ಹೋಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ತೆರಳಿ ಎಸ್ಪಿಗೆ ಕರೆ ಮಾಡಿಸಿದ್ದ.
ಈ ವೇಳೆ ಮಹಿಳಾ ಪಿಎಸ್ಐಗೆ ಹಲ್ಲೆ ಮಾಡಿರುವುದು ಸೇರಿದಂತೆ ಈತನ ದಾಖಲಾಗಿರುವ ಕೇಸ್ ಗಳಖ ಬಗ್ಗೆ ತಿಳಿದ ಸಿದ್ದರಾಮಯ್ಯ ಅವರು, ಹಲ್ಲೆ ಏಕೆ ಮಾಡಿದ್ದೀಯಾ? ಇಲ್ಲಿಂದ ಹೊರಟು ಹೋಗೆಂದು ಬೈದು ಕಳುಹಿಸಿದ್ದರು.
ಇದಾದ ನಂತರ ಅಲ್ಲಿಂತ ಹೊರಟು ಬಂದಿದ್ದ ಸಿದ್ದರಾಜು ಕಳೆದ ಕೆಲವು ತಿಂಗಳಿನಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದನು. ಕೊನೆಗೂ ಆತನನ್ನು ಪತ್ತೆ ಹಚ್ಚಿದ ಬೇಗೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.