ಚಾಮರಾಜನಗರ: ಖಾಸಗಿ ಫೈನಾನ್ಸ್ ವೊಂದು ಬಡಜನರಿಂದ ಹಣವನ್ನು ಸಂಗ್ರಹಿಸಿ ಬಳಿಕ ಮೋಸ ಮಾಡಿದ ಘಟನೆಯೊಂದು ಗುಂಡ್ಲುಪೇಟೆಯಲ್ಲಿ ನಡೆದಿದೆ.
ಉದಯಕಾಲ ಫೈನಾನ್ಸ್ ಹೆಸರಿನಲ್ಲಿ ಆರಂಭಗೊಂಡ ಫೈನಾನ್ಸ್ ತಾಲೂಕಿನ ಗ್ರಾಮಾಂತರ ಪ್ರದೇಶದ ಜನರಿಗೆ ಆಮಿಷವೊಡ್ಡಿ ಸಾವಿರಾರು ರೂ ಹಣವನ್ನು ಸಂಗ್ರಹಿಸಿದ್ದು, ಬಳಿಕ ಪಂಗನಾಮ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಅದರ ವ್ಯವಸ್ಥಾಪಕ ಹಕ್ಕಲಪುರ ಗ್ರಾಮದ ಮಹೇಂದ್ರ ಎಂಬಾತ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಈತ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಪಟ್ಟಣದ ಸುರಭಿ ಬಿಲ್ಡಿಂಗ್ ನಲ್ಲಿ ಉದಯಕಾಲ ಫೈನಾನ್ಸ್ ಎಂಬ ಹೆಸರಿನಲ್ಲಿ ಸಂಸ್ಥೆ ಆರಂಭಿಸಿ ಸಾವಿರಾರು ರೂಪಾಯಿಗಳನ್ನು ಮುಂಗಡ ಪಾವತಿಸಿಕೊಂಡಿದ್ದನು. ಅಲ್ಲದೆ ಉಳಿತಾಯ ಹಣದ ಮೇಲೆ ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿದ್ದನು. ಜನ ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದು ಹಣವನ್ನು ಪಾವತಿಸಿದ್ದರು. ಅಷ್ಟೇ ಅಲ್ಲದೆ ಕೆಲವು ಸ್ಥಳೀಯ ಯುವಕ ಯುವತಿಯರನ್ನು ಏಜೆಂಟರನ್ನಾಗಿಸಿ ಅವರ ಮೂಲಕ 10 ರಿಂದ 70 ಸಾವಿರದವರೆಗೂ ಹಣವನ್ನು ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಬಾಚಹಳ್ಳಿ, ಬೊಮ್ಮಲಾಪುರ, ಹೊನ್ನಶೆಟ್ಟರಹುಂಡಿ, ಕೊಡಸೋಗೆ, ಮದ್ದೂರು, ಇನ್ನಿತರ ಗ್ರಾಮಗಳ ಜನರಿಂದ ಸಂಗ್ರಹಿಸಿದ್ದನು.
ಕೂಲಿ ಮಾಡಿ ತಾವು ಸಂಪಾದಿಸಿದ ಹಣವನ್ನು ಕೆಲವರು ಇಲ್ಲಿ ಹೂಡಿಕೆ ಮಾಡಿದ್ದು, ಮೂರು ವರ್ಷದ ಬಳಿಕ ಬಡ್ಡಿಸಹಿತ ಹಣವನ್ನು ವಾಪಾಸ್ ನೀಡುವುದಾಗಿ ಹೇಳಿದ್ದನಲ್ಲದೆ, ಈ ಸಂಬಂಧ ಎಲ್ಲ ಖಾತೆದಾರರಿಗೂ ಬ್ಯಾಂಕ್ ಪಾಸ್ ಬುಕ್ ಮತ್ತು ಬಾಂಡ್ ನೀಡಿದ್ದನು. ಇದೀಗ ಮಹೇಂದ್ರ ಜನರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.
ಹೂಡಿಕೆ ಮಾಡಿದವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹೊನ್ನಶೆಟ್ಟರಹುಂಡಿ ಸಿದ್ದರಾಜು ಎಂಬುವರು ತಲೆಮರೆಸಿಕೊಂಡಿರುವ ಎಂಡಿ ಮಹೇಂದ್ರನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.