ಹನೂರು : ಚಾಲಕ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಚಾಲಕ, ನಿವಾರ್ಹಕ ಸೇರಿದಂತೆ ಹಲವರು ಗಾಯಗೊಂಡಿರುವ ಘಟನೆ ತಾಲೂಕಿನ ಕುಡುವಾಳೆ ಗ್ರಾಮ ಸಮೀಪದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಮಾಳಿಗನತ್ತ ಗ್ರಾಮದ ಶಿವಮ್ಮ (60) ಹಾಗೂ ಪಿ.ಜಿ ಪಾಳ್ಯ ಗ್ರಾಮದ ರಮೇಶ್ (30) ಮೃತಪಟ್ಟ ದುರ್ದೈವಿಗಳು.
ತಾಲೂಕಿನ ಕುಡುವಾಳೆ ಗ್ರಾಮದ ಮೂಲಕ ಪಿ.ಜಿ ಪಾಳ್ಯ ಹಾಗೂ ಒಡೆಯರಪಾಳ್ಯದ ಕಡೆಗೆ ಸೋಮವಾರ ಮಧ್ಯಾಹ್ನ 2.30ರಲ್ಲಿ ಸಾರಿಗೆ ಬಸ್ ತೆರಳುತ್ತಿತ್ತು. ಬಸ್ಸಿನಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ವೇಳೆ ಸ್ಟೇರಿಂಗ್ ರಾಡ್ ತುಂಡಾದ ಪರಿಣಾಮ ಚಾಲಕ ನಿಯಂತ್ರಣ ತಪಿದೆ. ಪರಿಣಾಮ ಕುಡುವಾಳೆ ಗ್ರಾಮ ಸಮೀಪದ ಮಾಳಿಗನತ್ತ ಕಿರು ಸೇತುವೆಯ ಹಳ್ಳಕ್ಕೆ ಬಸ್ ಮಗುಚಿ ಬಿದ್ದಿದೆ. ಘಟನೆ ನಡೆದ ತಕ್ಷಣ ಜಮೀನಿನಲ್ಲಿದ್ದ ಸುತ್ತಮುತ್ತಲಿನ ಜನ ಸ್ಥಳಕ್ಕೆ ಆಗಮಿಸಿ ಬಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಗಾಯಾಳುಗಳನ್ನು ಹೊರ ತೆಗೆದು ಗೂಡ್ಸ್ ವಾಹನಗಳಲ್ಲಿ ಪಿ.ಜಿ ಪಾಳ್ಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ತೀವ್ರ ಗಾಯಗೊಂಡಿದ್ದ ಶಿವಮ್ಮ ಮಾರ್ಗ ಮಧ್ಯೆ ಸಾವನ್ನಪ್ಪಿದರೆ, ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ಕೂಡಲೇ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ಅವರು ಆಸ್ಪತ್ರೆಗೆ ಆಗಮಿಸಿ ಇನ್ನುಳಿದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ 108 ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಹಾಗೂ ತೀವ್ರ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಸಣ್ಣಪುಟ್ಟ ಗಾಯಗೊಂಡ ಕೆಲವರಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಯಿತು. ಘಟನೆಗೆ ಸಂಬಂಧಿಸಿದಂತೆ ಹನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಆರ್. ನರೇಂದ್ರ ಅವರು, ನಾನೀಗ ವಿಧಾನಸಭೆ ಅಧಿವೇಶನದಲ್ಲಿದ್ದು, ನಡೆದಿರುವ ಘಟನೆ ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಅಗತ್ಯ ಕ್ರಮಕೈಗೊಂಡಿದ್ದು, ಈಗಾಗಲೇ ಡಿಎಚ್ಒ ಹಾಗೂ ಸಂಬಂಧಪಟ್ಟ ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆಯಲ್ಲದೇ ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಲು ಅಗತ್ಯ ಕ್ರಮ ವಹಿಸುವಂತೆ ಡಿಪೋ ವ್ಯವಸ್ಥಾಪಕರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.