ಚಾಮರಾಜನಗರ: ನ್ಯಾಯಾಧೀಶರು ಚಾಮರಾಜನಗರದ ಸಿಇಎನ್ ಠಾಣೆಗೆ ಭೇಟಿ ನೀಡಿದ್ದ ವೇಳೆ ಠಾಣೆಯ ಬಾಗಿಲು ಮುಚ್ಚಿದ್ದ ವಿಚಾರಕ್ಕೆ ಸಂಬಂಧಿಸಿದ್ದಂತೆ ಪೊಲೀಸ್ ಇನ್ಸ್ಪೆಕ್ಟರ್ನ್ನು ಅಮಾನತು ಮಾಡಲಾಗಿದೆ.
ಸಿಇಎನ್ (ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ತಡೆ) ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಅಮಾನತ್ತಾದವರು. ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ಸಿಇಎನ್ ಪೊಲೀಸ್ ಠಾಣೆಗೆ ಡಿ.3ರಂದು ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಠಾಣೆಯಲ್ಲಿ ಯಾರೂ ಇಲ್ಲದೇ, ಜೊತೆಗೆ ಬಾಗಿಲು ಹಾಕಿದ್ದರಿಂದ ‘ಈ ರೀತಿ ಠಾಣೆಗೆ ಬಾಗಿಲು ಹಾಕಿಕೊಂಡರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ, ಠಾಣೆಯೇ ಬಾಗಿಲು ಹಾಕಿಕೊಂಡಿದ್ದರೆ ದೂರು ಕೊಡಲು ಬರುವವರು ಏನು ಮಾಡಬೇಕೆಂದು’ ಎಸ್ಪಿಗೆ ತಮ್ಮ ಭೇಟಿಯ ಬಗ್ಗೆ ವರದಿ ನೀಡಿದ್ದರು.
ನ್ಯಾಯಾಧೀಶರ ವರದಿ ಗಮನಿಸಿ ಕರ್ತವ್ಯಲೋಪದ ಆಧಾರದಲ್ಲಿ ಇನ್ಸ್ಪೆಕ್ಟರ್ ನಂಜಪ್ಪ ಅವರನ್ನು ಅಮಾನತು ಮಾಡಿ ಮುಂದಿನ ತನಿಖೆಗೆ ಆದೇಶಿಸಲಾಗಿದೆ.