ಚಾಮರಾಜನಗರ: ಜಿಲ್ಲೆಯಲ್ಲೀಗ ಹುರುಳಿ ಒಕ್ಕಣೆಯ ಕಾಲವಾಗಿದ್ದು, ರೈತರು ತಮ್ಮ ಕಣದಲ್ಲಿ ಒಕ್ಕಣೆ ಮಾಡುವ ಬದಲು ವಾಹನಗಳು ಸಂಚರಿಸುವ ರಸ್ತೆಯಲ್ಲಿಯೇ ಹಾಕಿ ಒಕ್ಕಣೆ ಮಾಡುತ್ತಿರುವುದರಿಂದ ಹಲವು ರೀತಿಯ ತೊಂದರೆಗಳು ಎದುರಾಗುತ್ತಿವೆ.
ಈಗಾಗಲೇ ಹುರುಳಿ ಬಳ್ಳಿ ವಾಹನಗಳಿಗೆ ಸಿಲುಕಿ ಬೆಂಕಿ ಹತ್ತಿಕೊಂಡಿರುವ ಘಟನೆಗಳು ನಡೆದಿವೆ.ರಸ್ತೆಯಲ್ಲಿ ಒಕ್ಕಣೆ ಮಾಡಬಾರದು ಎಂಬ ಸೂಚನೆಯಿದ್ದರೂ ರೈತರು ಮಾತ್ರ ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ಬಿಡುತ್ತಿಲ್ಲ.
ಈ ನಡುವೆ ತಾಲ್ಲೂಕಿನ ಮಾದಲವಾಡಿ ಗ್ರಾಮದ ರಸ್ತೆಯಲ್ಲಿ ರೈತರು ತಾವು ಬೆಳದಿರುವ ಹುರಳಿ ಬೆಳೆಯನ್ನು ಒಕ್ಕಣೆಗೆ ಹಾಕಿದ್ದರಿಂದ ಹುರಳಿ ಸತ್ತೆಗಳು ವಾಹನಗಳಿಗೆ ಸಿಕ್ಕಿಕೊಂಡು ಗಂಟೆ ಗಟ್ಟಲೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಇದಕ್ಕೂ ಮೊದಲು ವಾಹನವೊಂದು ಬೆಂಕಿಗಾಹುತಿಯಾಗಿತ್ತು.
ಜಿಲ್ಲೆಯಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಪೊಲೀಸರು ತೆರವುಗೊಳಿಸಿದರೂ ಕೂಡ ಪೊಲೀಸರು ಗ್ರಾಮದಿಂದ ಹೊರ ಹೋಗುತ್ತಿದ್ದಂತೆಯೇ ಮತ್ತೆ ಒಕ್ಕಣೆ ಮಾಡುತ್ತಿರುವುದು ಮಾಮೂಲಿಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಿ ರಸ್ತೆಗಳಲ್ಲಿ ಒಕ್ಕಣೆ ಮಾಡುವುದನ್ನು ನಿಷೇಧಿಸಬೇಕಾಗಿದೆ.ಇಲ್ಲದೆ ಹೋದರೆ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಸಂಕಷ್ಟ ಎದುರಿಸುವುದು ತಪ್ಪಿದಲ್ಲ.