ಹನೂರು: ಬೈಕ್ನಲ್ಲಿ ಸಂಗ್ರಹಿಟ್ಟಿದ್ದ ಅರ್ಧ ಕೆಜಿ ಒಣ ಗಾಂಜಾವನ್ನು ವಶಪಡಿಸಿಕೊಂಡ ಅಬಕಾರಿ ಇಲಾಖೆಯ ಅಧಿಕಾರಿಗಳು ಆರೋಪಿಯೊಬ್ಬನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ಪುಷ್ಪಾಪುರ ಗ್ರಾಮದಲ್ಲಿ ನಡೆದಿದೆ.
ಪುಷ್ಪಾಪುರ ಗ್ರಾಮದ ನಿವಾಸಿ ಶಿವರಾಜು (22) ಎಂಬಾತ ತನ್ನ ಮನೆಯ ಬಳಿ ನಿಲ್ಲಿಸಿದ್ದ ಬೈಕ್ ನಲ್ಲಿ ಸುಮಾರು ಅರ್ಧ ಕೆಜಿಯಷ್ಟು ಗಾಂಜಾವನ್ನು ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದನು. ಈ ನಡುವೆ ಪುಷ್ಪಾಪುರ ಗ್ರಾಮದಲ್ಲಿ ಕೆಲವರು ಗಾಂಜಾ ಗಿಡ ಬೆಳೆಯುವಿಕೆ ಹಾಗೂ ಒಣ ಗಾಂಜಾ ಸಂಗ್ರಹಣೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಬರುತ್ತಿರುವ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಇತ್ತ ಹೆಚ್ಚಿನ ನಿಗಾ ವಹಿಸಿತ್ತು.
ಇದೆಲ್ಲದರ ಮಧ್ಯೆ ಖಚಿತ ಮಾಹಿತಿ ಮೇರೆಗೆ ಮೈಸೂರು ಅಬಕಾರಿ ಇಲಾಖೆಯ ಆಯುಕ್ತ ಬಿ.ಮಾದೇಶ್ ಹಾಗೂ ಚಾಮರಾಜನಗರ ಅಬಕಾರಿ ಉಪ ಆಯುಕ್ತ ಡಾ.ಕೆ.ಎಸ್ ಮುರುಳಿ ಅವರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಆಯುಕ್ತ ಎಂ.ಡಿ ಮೋಹನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕ ಸುನೀಲ್ ಹಾಗೂ ಸಿಬ್ಬಂದಿಗಳ ತಂಡ ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ದೊರೆತ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೌರಮ್ಮ ಎಂಬವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿದಾಗ ಪುತ್ರ ಶಿವರಾಜು ಎಂಬಾತ ಬೈಕ್ನಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾ ಪತ್ತೆಯಾಗಿದೆ.
ಬೈಕ್ ಸಹಿತ ಗಾಂಜಾ ವಶಪಡಿಸಿಕೊಂಡ ಅಬಕಾರಿ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಪೇದೆಗಳಾದ ಎಂ.ರಮೇಶ್, ಎನ್.ಸುಜನ್ರಾಜ್ ಹಾಗೂ ಮಂಜುಪ್ರಸಾದ್ ಭಾಗವಹಿಸಿದ್ದರು.