ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಕೈಕೊಡುವುದು ಆಗಾಗ್ಗೆ ನಡೆಯುತ್ತಿರುತ್ತದೆ. ಅದರಲ್ಲೂ ಮುಂಗಾರು ಮಳೆಗಿಂತ ಹೆಚ್ಚಾಗಿ ಹಿಂಗಾರು ಮಳೆ ಕೆಲವೊಮ್ಮೆ ಜಾಸ್ತಿ ಸುರಿಯುತ್ತದೆ. ಆದರೆ ಈ ಬಾರಿ ಪೂರ್ವ ಮುಂಗಾರಿನಲ್ಲಿ (ಮೇ ತಿಂಗಳಲ್ಲಿ) ಸುವರ್ಣಾವತಿ ಜಲಾಶಯಕ್ಕೆ ನೀರು ಹರಿದು ಬಂದು ನೀರಿನ ಮಟ್ಟ ಏರಿಕೆಯಾಗಿರುವುದು ವಿಶೇಷವಾಗಿದೆ.
ಆಸನಿ ಚಂಡಮಾರುತದ ಪರಿಣಾಮ ಒಂದು ವಾರಗಳ ಕಾಲ ಮಳೆ ಸುರಿದಿದ್ದರಿಂದ ರಾಜ್ಯದಲ್ಲಿ ಬಹುತೇಕ ಜಲಾಶಯಗಳಿಗೆ ನೀರು ಹರಿದು ಬಂದಿತ್ತು. ಅದರಂತೆ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯಕ್ಕೂ ನೀರು ಬಂದಿದ್ದು ಜಲಾಶಯ ಪಾತ್ರದಲ್ಲಿರುವ ಜನರಿಗೆ ಖುಷಿ ತಂದಿದೆ. ಹಾಗೆನೋಡಿದರೆ ಈ ಜಲಾಶಯವು ಸಮುದ್ರ ಮಟ್ಟಕ್ಕಿಂತ 2454 ಅಡಿ ಎತ್ತರದಲ್ಲಿದ್ದು, ಮಳೆ ಸುರಿದರೆ ಬೇಡಗುಳಿ, ಪುಣಜನೂರು, ದಿಂಬಂ ನಿಂದ ನೀರು ಹರಿದು ಬರುವುದರೊಂದಿಗೆ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗುವುದು ಮಾಮೂಲಿಯಾಗಿದೆ.
ಈ ಬಾರಿ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗಲು ಒಂದೆಡೆ ಆಸನಿ ಚಂಡಮಾರುತ ಮತ್ತು ಕಳೆದ ಬಾರಿ ಹಿಂಗಾರಿನಲ್ಲಿ ಅಂದರೆ ನವೆಂಬರ್ ನಲ್ಲಿ ಹೆಚ್ಚು ಮಳೆ ಸುರಿದು ಜಲಾಶಯ ಭರ್ತಿಯಾಗುವುದರೊಂದಿಗೆ ಹೆಚ್ಚುವರಿ ನೀರು ಹರಿದು ಹೋಗಿತ್ತು. ಆದ್ದರಿಂದ ಈ ಸಲ ಮಳೆ ಸುರಿಯುತ್ತಿದ್ದಂತೆಯೇ ಜಲಾಶಯದಲ್ಲಿ ನೀರು ಏರಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾದರೆ ಜಲಾಶಯ ಬಹುಬೇಗ ತುಂಬುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಹಿಂದೆಯೇ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯ ನದಿಪಾತ್ರದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಸದ್ಯ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾನಯನ ಪ್ರದೇಶದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಶೇಖರಣಾ ಸಾಮರ್ಥ್ಯವು ಗರಿಷ್ಠ ಮಟ್ಟ ತಲುಪುವ ಹಂತದಲ್ಲಿದೆ, ಮುಂದಿನ ದಿನಗಳಲ್ಲಿ ಮಳೆ ಸುರಿದರೆ ಜಲಾಶಯವು ಯಾವುದೇ ಸಮಯದಲ್ಲಿ ಭರ್ತಿಯಾದರೂ ಭರ್ತಿಯಾಗಬಹುದು.
ಈ ಜಲಾಶಯದ ಬಗ್ಗೆ ಹೇಳುವುದಾದರೆ ಸುವರ್ಣಾವತಿ ಚಿಕ್ಕಹೊಳೆ ಜಲಾಶಯಗಳು ಅವಳಿಯಾಗಿದ್ದು, ಇದು ಭರ್ತಿಯಾಗುವುದು ಅಪರೂಪವೇ 2010ರಲ್ಲಿ ತುಂಬಿದ್ದವು. ಆ ನಂತರ ಮಳೆ ಸರಿಯಾಗಿ ಸುರಿಯದ ಕಾರಣದಿಂದ ಭರ್ತಿಯಾಗಿರಲಿಲ್ಲ ಹನ್ನೊಂದು ವರ್ಷಗಳ ಬಳಿಕ ಕಳೆದ (2021) ವರ್ಷ ನವೆಂಬರ್ ನಲ್ಲಿ ಹಿಂಗಾರು ಮಳೆಯಿಂದ ಭರ್ತಿಯಾಗಿತ್ತು. ಈ ಬಾರಿಯೂ ಭರ್ತಿಯಾಗುವ ಎಲ್ಲ ಲಕ್ಷಣಗಳಿವೆ.
ಜಲಾಶಯ ಭರ್ತಿಯಾಗುವುದರಿಂದ ರೈತರ ಕೃಷಿಭೂಮಿಗೆ ನೀರು ಒದಗಿಸುವುದಲ್ಲದೆ, ಅಂತರ್ಜಲವೂ ಹೆಚ್ಚುತ್ತಿದ್ದು ಇದರಿಂದ ಸುತ್ತಮುತ್ತಲಿನ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.