ಚಾಮರಾಜನಗರ: ಪತ್ನಿ ಕೊಂದು ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಯೊಬ್ಬ ಕಾರಾಗೃಹದ ಮೊದಲನೆ ಮಹಡಿಯಿಂದ ಬಿದ್ದು ಅಸುನೀಗಿರುವ ಘಟನೆ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದ ಕೈದಿ ಮಂಜು ಎಂಬಾತನೇ ಸಾವನ್ನಪ್ಪಿದವನು.
ಶನಿವಾರ ಬೆಳಗ್ಗೆ ಜೈಲಿನ ಮೊದಲನೆ ಮಹಡಿಯ ಮೆಟ್ಟಿಲುಗಳಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಂಜುನನ್ನು ಕೂಡಲೇ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕೈದಿ ಮಂಜು ಆಯತಪ್ಪಿ ಬಿದ್ದನಾ ಅಥವಾ ಆತ್ಮಹತ್ಯೆ ಮಾಡಿಕೊಂಡನಾ ಎನ್ನುವುದರ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲ. ಚಾಮರಾಜನಗರ ಮೆಡಿಕಲ್ ಆಸ್ಪತ್ರೆಯಲ್ಲಿ ಮೃತದೇಹವಿದ್ದು ಚಾಮರಾಜನಗರ ಪಟ್ಟಣ ಠಾಣೆಗೆ ಜೈಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
18 ವರ್ಷಗಳ ಹಿಂದೆ ಉತ್ತುವಳ್ಳಿ ಗ್ರಾಮದ ಚಿನ್ನತಾಯಮ್ಮ ಎಂಬಾಕೆಯನ್ನು ಮಂಜು ವಿವಾಹವಾಗಿದ್ದ. ಆದರೆ ಐದಾರು ವರ್ಷಗಳ ಬಳಿಕ ಮದ್ಯಪಾನಕ್ಕೆ ದಾಸನಾಗಿ ನಿತ್ಯ ಪತ್ನಿಯೊಂದಿಗೆ ಜಗಳ ಮಾಡುವುದನ್ನು ರೂಢಿಸಿಕೊಂಡಿದ್ದನು. ಅದೇ ರೀತಿ, 2017 ರ ಅಕ್ಟೋಬರ್ 26 ಮಧ್ಯರಾತ್ರಿ ದಂಪತಿ ಜಗಳ ತಾರಕಕ್ಕೇರಿತ್ತು. ಆ ವೇಳೆ, ಮಂಜು ಪತ್ನಿ ಚಿನ್ನತಾಯಮ್ಮಳಿಗೆ ಮರದ ಪಟ್ಟಿಯಿಂದ ತಲೆಗೆ ಹೊಡೆದು, ಜುಟ್ಟು ಹಿಡಿದು ಗೋಡೆಗೆ ಗುದ್ದಿಸಿ ಕೊಲೆ ಮಾಡಿದ್ದನು.
ಅಂದು ರಾತ್ರಿ ತನ್ನ ಅಪ್ಪ – ಅಮ್ಮನ ನಡುವೆ ನಡೆದ ಗಲಾಟೆಯನ್ನು ಸಂಪೂರ್ಣ ಕಂಡಿದ್ದ ಮಗ ಕೊಲೆ ಮಾಡಿದ್ದು ಹೇಗೆ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಿ, ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಿದ್ದನು.