ಗುಂಡ್ಲುಪೇಟೆ : ಕೆರೆ ಒಡೆದ ಪರಿಣಾಮ ಜಮೀನಿಗೆ ನೀರು ನುಗ್ಗಿ ಫಸಲು ಕಳೆದುಕೊಂಡ ರೈತನಿಗೆ ಆರು ತಿಂಗಳಾದರೂ ಪರಿಹಾರ ಸಿಗದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರೈತ ನಾಗಪ್ಪ ಎಂಬುವರೇ ಬೆಳೆ ಕಳೆದುಕೊಂಡು ಪರಿಹಾರ ಸಿಗದ ಪರಿತಪಿಸುತ್ತಿರುವವರು. ಇವರು ತಮಗೆ ಸೇರಿದ ಒಂದು ಎಕರೆ ಪ್ರದೇಶದಲ್ಲಿ ಅರಸಿನ ಬೆಳೆದಿದ್ದರು. ಇದರ ಕೃಷಿಗಾಗಿ ಸಾಲ ಮಾಡಿಕೊಂಡಿದ್ದರು. ಫಸಲು ಉತ್ತಮವಾಗಿ ಬಂದಿದ್ದರೆ ಸುಮಾರು ಮೂವತೈದಕ್ಕೂ ಹೆಚ್ಚು ಕ್ವಿಂಟಾಲ್ ಅರಿಸಿನ ದೊರೆಯುತ್ತಿತ್ತು. ಆದರೆ ಕಳೆದ ಆಗಸ್ಟ್ ನಲ್ಲಿ ಬೆಳಚಲವಾಡಿ ಗ್ರಾಮದ ಕೆರೆ ಒಡೆದಿತ್ತು ಪರಿಣಾಮ ನಾಗಪ್ಪ ಅವರ ಜಮೀನು ಮೇಲೆ ನೀರು ಹರಿದಿದ್ದರಿಂದ ಅರಸಿನ ಬೆಳೆ ಮಾತ್ರವಲ್ಲದೆ, ಪೈಪ್, ಡ್ರಿಪ್ ಎಲ್ಲವೂ ನೀರು ಪಾಲಾಗಿತ್ತು. ಇದರಿಂದ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು.
ಅಂದು ಘಟನಾ ಸ್ಥಳಕ್ಕೆ ಸಂಬಂಧ ಪಟ್ಟ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಮತ್ತು ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಆಗಮಿಸಿ ಪರಿಶೀಲಿಸಿ ಅಂದಾಜು ಮೊತ್ತ ಎರಡೂವರೆ ಲಕ್ಷ ರೂ. ನಷ್ಟವಾಗಿರುವುದಾಗಿ ದಾಖಲಿಸಿಕೊಂಡು ಹೋಗಿದ್ದರು. ನಂತರ ಸರ್ಕಾರದಿಂದ ಪರಿಹಾರವಾಗಿ ಹನ್ನೆರಡು ಸಾವಿರ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಡೆದ ಪತ್ರದಲ್ಲಿ ನಮೂದಿಸಲಾಯಿತು. ಆದರೆ ಅದೂ ಕೂಡ ಬಂದಿಲ್ಲ. ಸುಮಾರು 6 ತಿಂಗಳು ಕಳೆದರೂ ಯಾವುದೇ ಪರಿಹಾರ ಬಂದಿಲ್ಲ ಎನ್ನುವುದು ರೈತನ ಅಳಲಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ನಷ್ಟವಾಗಿರುವ ರೈತನಿಗೆ ಪರಿಹಾರ ನೀಡುತ್ತಾರಾ?ಎಂಬುದನ್ನು ಕಾದು ನೋಡಬೇಕಾಗಿದೆ.