ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಭಯಪಡುವಂತಾಗಿದೆ ಕಳೆದ ಒಂದು ವಾರದ ಅಂತರದಲ್ಲಿ ತಾಲೂಕಿನ ವೀರನಪುರ ಗ್ರಾಮದಲ್ಲಿ ತೋಟದ ಮನೆಯ ಬಳಿ ಎರಡು ಚಿರತೆಗಳು ಬೋನಿಗೆ ಬಿದ್ದಿವೆ. ಇದು ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿದೆ.
ಈ ನಡುವೆ ವೀರನಪುರ ಗ್ರಾಮವ ಚಲುವಮ್ಮ ರವರ ತೋಟದ ಮನೆಯ ಸುತ್ತ ಮುತ್ತ ಚಿರತೆಗಳು ಓಡಾಟ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರು ಮತ್ತು ತೋಟದ ಮನೆಯ ಚಲುವಮ್ಮ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅದರಂತೆ ಅವರ ತೋಟದ ಮನೆಯ ಬಳಿ ಅರಣ್ಯ ಇಲಾಖೆಯವರು ಚಿರತೆ ಸೆರೆಗಾಗಿ ಬೋನಿಟ್ಟಿದ್ದರು. ಇದೀಗ ಒಂದು ವಾರದಲ್ಲಿ ಎರಡು ಚಿರತೆಗಳು ಬೋನಿಗೆ ಬಿದ್ದಿದ್ದು, ಇನ್ನೆಷ್ಟು ಚಿರತೆಗಳು ಇಲ್ಲಿ ಇವೆಯೇನೋ ಎಂಬ ಭಯ ಕಾಡಲಾರಂಭಿಸಿದೆ. ಸದ್ಯ ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಈಗಾಗಲೇ ಸೆರೆ ಸಿಕ್ಕಿರುವ ಚಿರತೆಯು ಕಳೆದ ಆರು ತಿಂಗಳಿಂದ ರೈತರಿಗೆ ಉಪಟಳ ನೀಡುತ್ತಾ ಹಲವು ಜಾನುವಾರುಗಳನ್ನು ಬಲಿ ತೆಗೆದುಕೊಂಡಿತ್ತು.
ಇನ್ನು ಚಿರತೆಗಳಿರಬಹುದೆಂಬ ಸಂಶಯದಲ್ಲಿ ಬೋನನ್ನು ಇಡಲಾಗಿದ್ದು ಇನ್ನು ಯಾವುದಾದರೂ ಚಿರತೆ ಇದರೊಳಗೆ ಬೀಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.