ಚಾಮರಾಜನಗರ : ರೈತರ ಬಗ್ಗೆ ಅವಹೇಳನಕಾರಿಯಾಗಿ ಲಿಖಿತವಾಗಿ ಚಾಮರಾಜನಗರ ಜಿಲ್ಲಾಡಳಿತಕ್ಕೆ ಹೇಳಿಕೆ ನೀಡಿದ್ದ ಚಾಮರಾಜನಗರ ಜಿಲ್ಲೆಯ ಕುಂತರು ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಲಿಯ ಉಪಾಧ್ಯಕ್ಷ ಶರವಣ್ಣ ರವರ ಪರ ವಿರೋಧವಾಗಿ ಚಾಮರಾಜನಗರದಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆ ನಡೆದು ಕೆಲ ಗಂಟೆಗಳ ಕಾಲ ಉದ್ವಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಾಮರಾಜನಗರ ಜಿಲ್ಲೆಯ ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಲಿ ಉಪಾಧ್ಯಕ್ಷರ ವಿರುದ್ಧ ಕಳೆದ ಹನ್ನೆರಡು ದಿನಗಳಿಂದ ಜಿಲ್ಲಾಡಳಿತ ಮುಂಭಾಗದಲ್ಲಿ ಕಬ್ಬು ಬೆಳೆಗಾರರ ಸಂಘ ಮತ್ತು ರೈತ ಸಂಘದವರು ಹೋರಾಟ ನಡೆಸುತ್ತಿದ್ದರೆ, ಗುರುವಾರ ದಿಢೀರ್ ಎಂದು ಕುಂತೂರು ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ರೈತರು, ಲಾರಿ ಚಾಲಕರು ಟ್ರ್ಯಾಕ್ಟರ್ ಚಾಲಕರು ಮತ್ತೊಂದು ಪ್ರತಿಭಟನೆ ನಡೆಸಿದರು.
ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಕಬ್ಬನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಆಗಮಿಸಿದಾಗ ಜಿಲ್ಲಾಡಳಿತ ಭವನ ಬಳಿ ಉದ್ವಗ್ನ ಪರಿಸ್ಥಿತಿ ಎದುರಾಯಿತು.
ಎರಡು ರೈತ ಬಣಗಳು ಪ್ರತ್ಯೇಕವಾಗಿ ಮುಷ್ಕರಕ್ಕೆ ಮುಂದಾದರು. ರಾಜ್ಯ ಕಬ್ಬುಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಶರವಣ್ಣನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂಭಾಗ ಧರಣಿ ನಡೆಸಿ, ಅಲ್ಲೇ ಊಟವನ್ನು ಮಾಡಿದರು.
ಜಿಲ್ಲಾಡಳಿತ ಭವನದ ಮುಂಭಾಗದ ಪೊಲೀಸ್ ಚೌಕಿ ಬಳಿ ನೂರಾರು ರೈತರು ಧರಣಿ ನಡೆಸಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಲಿ ಉಪಾಧ್ಯಕ್ಷ ಶರವಣ್ಣ ರವರನ್ನು ಯಾವುದೇ ಕಾರಣಕಲ್ಕೂ ರಾಜ್ಯದಿಂದ ಗಡಿಪಾರು ಮಾಡಬಾರದೆಂದು ಒತ್ತಾಯಿಸಲಾಯಿತು. ಈ ವೇಳೆ ರೈತ ಮುಖಂಡ ಅಣಗಳ್ಳಿಬಸವರಾಜು ಮಾತನಾಡಿ, ಶರವಣ್ಣ ದಕ್ಷ ಆಡಳಿತಗಾರಿ ಇವರನ್ನುಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದರು.
ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಲಿ ಉಪಾಧ್ಯಕ್ಷ ಶರವಣ್ಣ ಉಳಿಸುವಂತೆ ನಡೆಸುತ್ತಿದ್ದ ರೈತರ ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆಗಮಿಸಿ ಮನವಿ ಸ್ವೀಕರಿಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಒಟ್ಟಿನಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಲಿಯ ಉಪಾಧ್ಯಕ್ಷ ಶರವಣ್ಣ ರವರ ವಿಚಾರದಲ್ಲಿ ರೈತರ ಸಂಘಟನೆಗಳಲ್ಲೇ ಒಡಕು ಕಾಣಿಸಿಕೊಂಡಿದ್ದು, ನಿಜವಾದ ರೈತರಿಗೆ ತಲೆನೋವಾಗಿದೆ. ಈ ರೈತ ಬಣಗಳ ಕಚ್ಚಾಟವು ಎಂದು ಮುಗಿಯುವುದೋ ಎಂದು ಕಾದು ನೋಡಬೇಕಾಗಿದೆ.