ಚಾಮರಾಜನಗರ: ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಬಂಡೀಪುರ ಅರಣ್ಯದಲ್ಲಿ ಹಾದು ಹೋಗಿದ್ದು, ಈ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ರಸ್ತೆ ಅಪಘಾತದಲ್ಲಿ ವನ್ಯಜೀವಿಗಳು ಸಾವನ್ನಪ್ಪುತ್ತಿರುವುದರಿಂದ ಈ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಬಂದ್ ಮಾಡುವ ಎಲ್ಲ ಸಾಧ್ಯತೆಗಳು ಎದುರಾಗಿವೆ.
ಈ ಸಂಬಂಧ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠವು ವನ್ಯಜೀವಿಗಳ ರಕ್ಷಣೆಗಾಗಿ ರಾತ್ರಿ ಸಂಚಾರ ನಿರ್ಬಂಧಿಸಲಿರುವ ಸಾಧಕ – ಬಾಧಕಗಳ ಬಗ್ಗೆ ಹಾಗೂ ಬಂದ್ ಮಾಡುವ ಬಗ್ಗೆ ಕುರಿತು ಸವಿಸ್ತಾರವಾದ ವರದಿ ಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ತಮಿಳುನಾಡು ಲೋಕಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ತಮಿಳುನಾಡಿನ ಬಣ್ಣಾರಿ ಮತ್ತು ದಿಂಬಂ ನಡುವೆ ರಾತ್ರಿ 9 ರಿಂದ ಬೆಳಗ್ಗೆ 6 ವರೆಗೆ ರಾತ್ರಿ ಸಂಚಾರ ನಿರ್ಬಂಧಿಸುವ ಕುರಿತು ಫೆ. 3 ಕ್ಕೆ ವರದಿ ಸಲ್ಲಿಸುವಂತೆ ಎನ್ಹೆಚ್ಎ ಪರ ವಕೀಲ ಶ್ರೀನಿವಾಸನ್ ಅವರಿಗೆ ನ್ಯಾಯಾಧೀಶರುಗಳಾದ ವಿ.ಭಾರತಿದಾಸನ್ ಮತ್ತು ಎನ್.ಸತೀಶ್ ಕುಮಾರ್ ಅವರ ವಿಭಾಗೀಯ ಪೀಠ ಸೂಚಿಸಿದೆ.
ಅಮಿಕಸ್ ಕ್ಯೂರಿ ಮತ್ತು ಅರ್ಜಿದಾರರ ಪರ ವಕೀಲರು, ರಾತ್ರಿ ವೇಳೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸುವುದೇ ಅಪಘಾತದಿಂದ ಕಾಡು ಪ್ರಾಣಿಗಳ ಸಾವನ್ನು ತಡೆಯುವ ಏಕೈಕ ಮಾರ್ಗವೆಂದು ಮನವಿ ಮಾಡಿಕೊಂಡಿದ್ದು, ಫೆ.3 ವಾದ – ಪ್ರತಿವಾದ ಈಗ ಕುತೂಹಲಕ್ಕೆ ಎಡೆಮಾಡಿದೆ.
ಕೆಲ ವರ್ಷಗಳ ಹಿಂದೆ ಬಣ್ಣಾರಿ ಮತ್ತು ದಿಂಬಂ ನಡುವಿನ ರಸ್ತೆಯನ್ನು ಕೆಲ ತಿಂಗಳುಗಳ ಮಟ್ಟಿಗೆ ನಿರ್ಬಂಧ ಮಾಡಲಾಗಿತ್ತು. ಬಳಿಕ, ತೆರವುಗೊಳಿಸಲಾಗಿತ್ತು. ದಿಂಬಂ ನ ತಿರುವುಗಳಲ್ಲಿ ಚಿರತೆಗಳು ಕಾಣುವುದು ಸರ್ವೇ ಸಾಮಾನ್ಯ. ಜತೆಗೆ ಆಗಾಗ ಹುಲಿಗಳು ದರ್ಶನ ನೀಡುತ್ತಿದೆ.
ಬೆಂಗಳೂರು – ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ (NH-958) ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶವನ್ನು ಹಾದು ಹೋಗಲಿದ್ದು, 2012 ರಿಂದ 2021 ರವರೆಗೆ ಮೂರು ಚಿರತೆಗಳು ಸೇರಿದಂತೆ 152 ಕಾಡು ಪ್ರಾಣಿಗಳು ಅಪಘಾತದಲ್ಲಿ ಮೃತಪಟ್ಟಿವೆ.