ಚಾಮರಾಜನಗರ : ಜಿಲ್ಲೆಯ ಬಾಣಳ್ಳಿ ಗೇಟ್ ಬಳಿಯಲ್ಲಿ ನಿನ್ನೆ ರಾತ್ರಿ ಕಾರು ಮತ್ತು ಅಶೋಕ್ ಲೈಲ್ಯಾಂಡ್ ಲಾರಿಯ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮಾಜಿ ಶಾಸಕ ಸೇರಿ ಮೂವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಚಾಮರಾಜನಗರ ತಾಲೂಕಿನ ಬಾಣಳ್ಳಿ ಗೇಟ್ ಬಳಿಯಲ್ಲಿ ಕಳೆದ ರಾತ್ರಿ ಕೊಳ್ಳೇಗಾಲದ ಮಾಜಿ ಶಾಸಕ ಎಸ್ ಬಾಲರಾಜು ಅವರ ಕಾರು ಹಾಗೂ ಅಶೋಕ್ ಲೈಲ್ಯಾಂಡ್ ಲಾರಿಯ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮದಿಂದಾಗಿ ಮಾಜಿ ಶಾಸಕ ಬಾಲರಾಜು ಹಾಗೂ ಕಾರು ಚಾಲಕ ಮೋಹನ್ ಮತ್ತು ಕ್ಲೀನರ್ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಈ ಅಪಘಾತದಲ್ಲಿ ಮಾಜಿ ಶಾಸಕ ಎಸ್ ಬಾಲರಾಜು ಪ್ರಾಣಾಪಾಯದಿಂದ ಪಾರಾಗಿದ್ದರೇ, ಕಾರು ಚಾಲಕ ಮೋಹನ್, ಕ್ಲೀನರ್ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಂದಹಾಗೇ ಮಾಜಿ ಶಾಸಕ ಎಸ್ ಬಾಲರಾಜು ಅವರು, ನಿನ್ನೆ ರಾತ್ರಿ ಯಳಂದೂರಿನಿಂದ ಮೈಸೂರಿಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದ್ಲಲಿ ಬಾಣಳ್ಳಿ ಗೇಟ್ ಬಳಿ ಕಾರು ಹಾಗೂ ಲಾರಿಯ ನಡುವೆ ಡಿಕ್ಕಿಯಾಗಿದೆ. ಅಪಘಾತದ ಸಂದರ್ಭದಲ್ಲಿ ಕಾರಿನ ಏರ್ ಬ್ಯಾಗ್ ಓಪನ್ ಆದ ಕಾರಣ, ಮಾಜಿ ಶಾಸಕರಿಗೆ ಹೆಚ್ಚು ಪೆಟ್ಟು ಬಿದ್ದಿಲ್ಲ. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.