ಚಾಮರಾಜನಗರ : ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ರಾಂಪುರ ಆನೆ ಶಿಬಿರದ ಸಾಕಾನೆ ಭಾಸ್ಕರ ಕಳೆದ ಕೆಲವು ತಿಂಗಳಿಂದ ನಾಪತ್ತೆಯಾಗಿದ್ದು, ಇದೀಗ ಪಕ್ಕದ ಕೇರಳ ರಾಜ್ಯದ ಕಾಡಿನಲ್ಲಿದೆ ಎನ್ನುವುದು ತಿಳಿದು ಬಂದಿದೆ.
ಶ್ರೀರಾಂಪುರ ಆನೆ ಶಿಬಿರದಲ್ಲಿದ್ದ ಹತ್ತು ವರ್ಷದ ಭಾಸ್ಕರ ಹೊಸ ಪರಿಸರ ಹುಡುಕಿಕೊಂಡು ಅರಣ್ಯದಲ್ಲಿ ತೆರಳಿದ್ದು, ಕಳೆದ ಕೆಲವು ತಿಂಗಳ ಹಿಂದಷ್ಟೇ ಕಬಿನಿ ಹಿನ್ನೀರು ದಾಟಿ ನಾಗರಹೊಳೆ ಅಭಯಾರಣ್ಯ ಸೇರಿತ್ತು. ಇದೀಗ ಕೇರಳ ಅರಣ್ಯದಲ್ಲಿನ ಕಾಡಾನೆಗಳನ್ನು ಸೇರಿಕೊಂಡಿದೆ ಎಂದು ಹೇಳಲಾಗಿದೆ.
ಶ್ರೀ ರಾಂಪುರ ಆನೆ ಶಿಬಿರಕ್ಕೆ ಹೊಂದಿಕೊಂಡಂತಿರುವ ಕೇರಳ ಅರಣ್ಯದ ನಲ್ಲತನ್ನಿ ಕ್ಯಾಂಪ್ ಸುತ್ತ ಭಾಸ್ಕರ ಅಡ್ಡಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರ ಕೊರಳಲ್ಲಿ ಗಂಟೆ ಕಟ್ಟಿರುವುದರಿಂದ ಅದನ್ನು ಪತ್ತೆಹಚ್ಚುವುದು ಸುಲಭವಾಗಿದ್ದು, ಕೇರಳದ ವೈನಾಡು ವನ್ಯಜೀವಿ ವಲಯದ ನಲ್ಲತನಿ ಭಾಗದಲ್ಲಿ ಕಾಡಾನೆಗಳ ಜೊತೆ ಇರುವುದನ್ನು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಾಕಾನೆ ಭಾಸ್ಕರನನ್ನು ಹಿಡಿಯಲು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಆದೇಶ ಸಿಕ್ಕ ತಕ್ಷಣ ಕೇರಳದತ್ತ ಹೆಜ್ಜೆ ಹಾಕಿರುವ ಭಾಸ್ಕರ ಆನೆಯನ್ನು ಸೆರೆ ಹಿಡಿದು ಕರೆತರಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ಪ್ರಭಾರ ನಿರ್ದೇಶಕ ಕರಿಕಾಳನ್ ಹೇಳಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.