ಭಾರತೀನಗರ: ಮುಂದಿನ ಚುನಾವಣೆಯಲ್ಲಿ ರೈತರ ಹಾಗೂ ಬಡವರ ಆಶಾಕಿರಣರಾದ ಎಚ್.ಡಿ.ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷವನ್ನು ಆಯ್ಕೆಗೊಳಿಸುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ಡಿ.ಸಿ.ತಮ್ಮಣ್ಣ ಕೋರಿದರು.
ದೊಡ್ಡರಸಿನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಡ್ಯದ ಅಭಿವೃದ್ದಿಗಾಗಿ 8 ಸಾವಿರ ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದವರು ಮಂಡ್ಯ ಬಜೆಟ್ ಎಂದು ಟೀಕೆ ಮಾಡುತ್ತಿದ್ದರು. ಇದನ್ನು ಮಂಡ್ಯಜಿಲ್ಲೆಯವರು ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದರು.
ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ರೈತರ 45 ಸಾವಿರ ಕೋಟಿ ಸಾಲಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿದ್ದು ಈಗಾಗಲೇ ರಾಜ್ಯಾದ್ಯಂತ ಪಂಚರತ್ನ ಯೋಜನೆಯನ್ನು ಜಾರಿಗೊಳಿಸಿ ಪ್ರತಿಯೊಬ್ಬರಿಗೂ ಆರೋಗ್ಯ, ಶಿಕ್ಷಣ, ನೀರಾವರಿ, ರೈತ ಚೈತನ್ಯ, ಯುವ ಸಮುದಾಯ ಸಬಲೀಕರಣಗಳನ್ನು ಜಾರಿಗೊಳಿಸಲು ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಿದ್ದಾರೆಂದರು. ಹಣ ಹೆಂಡದ ಆಮಿಷಗಳಿಗೆ ಒಳಗಾಗದೆ ಯೋಗ್ಯರಿಗೆ ಮತನೀಡಲು ಮುಂದಾಗಬೇಕೆಂದು ಕೋರಿದರು.
ಜೆಡಿಎಸ್ ರಾಜ್ಯಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ದಿಗಾಗಿ ಪಕ್ಷಾತೀತವಾಗಿ ಶ್ರಮಿಸಿದ್ದಾರೆ. ಕ್ಷಣಿಕ ಸುಖಗಳಿಗೆ, ಆಮಿಷಗಳಿಗೆ ಒಳಗಾಗದೆ ಕ್ಷೇತ್ರದ ಪ್ರತಿನಿಧಿಯನ್ನು ಆಯ್ಕೆಗೊಳಿಸಬೇಕು. ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿದ್ದೀರಿ. ನಮ್ಮ ಆಯ್ಕೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಪೂರಕವಾಗಬೇಕಾದರೆ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು 2023ರ ಚುನಾವಣೆಯಲ್ಲಿ ಆಯ್ಕೆಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಚಿಕ್ಕತಿಮ್ಮೇಗೌಡ, ಎಚ್.ಎಂ.ಮರಿಮಾದೇಗೌಡ, ಮಾದನಾಯಕನಹಳ್ಳಿ ರಾಜಣ್ಣ, ನಗರಕೆರೆ ಸಂದೀಪ್, ತೊಪ್ಪನಹಳ್ಳಿ ಮಹೇಂದ್ರ, ಚಿಕ್ಕಹುಚ್ಚೇಗೌಡ, ಮಂಚೇಗೌಡ, ಆನಂದ, ಮಧು, ಹೊನ್ನಪ್ಪ, ಪ್ರದೀಪ್ ಸೇರಿದಂತೆ ಹಲವರಿದ್ದರು.