ಮೈಸೂರು: ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಮೈಸೂರು, ರೋಟರಿ ಸಂಸ್ಥೆ ಬನ್ನೂರು ಮತ್ತು ಲಯನ್ಸ್ ಗ್ರೀನ್ ಲ್ಯಾಂಡ್ ಬನ್ನೂರು , ವಿವೇಕಾನಂದ ಶಿಕ್ಷಣ ಸಂಸ್ಥೆ ಬನ್ನೂರು, ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ, ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಕಾನ್ ಸಿಂಗ್ ಜೀ ರಾಜ್ ಪುರೋಹಿತ್ ರವರ 15ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಶ್ರೀ ಮತಿ ಗೌರಿದೇವಿ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕೆ. ಮಹೇಂದ್ರ ಸಿಂಗ್ ಕಾಳಪ್ಪ, ಲಯನ್ಸ್ ಗ್ರೀನ್ ಲ್ಯಾಂಡ್ ಮಾಜಿ ಅಧ್ಯಕ್ಷ ಕೆ.ರಾಜೇಶ್ ಕುಮಾರ್ ಇವರು ತಿ.ನರಸೀಪುರ ತಾಲ್ಲೂಕಿನ ಬನ್ನೂರು ಪಟ್ಟಣದ ವಿವೇಕಾನಂದ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಲವ್ಲಿ ಸ್ಟಾರ್ ನಟ ಪ್ರೇಮ್ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಕ್ಕಳು ಆಸ್ತಿ ಅಂತಸ್ತು ಮಾಡಿದ್ರೆ ಸಾಲದು, ತಂದೆ ತಾಯಿಯನ್ನು ನೆನಪು ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಮಕ್ಕಳು ಕಳುಹಿಸುತ್ತಾರೆ. ಇದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು. ಕಳೆದ 15 ವರ್ಷದಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ತಮ್ಮ ತಂದೆಯ ಹೆಸರಿನಲ್ಲಿ ಆಯೋಜನೆ ಮಾಡಿಕೊಂಡು ಬಂದಿದ್ದು, ಇಂತಹ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳು ನಡೆಯಬೇಕು ಇದಕ್ಕೆ ನಮ್ಮ ಬೆಂಬಲವಿದೆ. ಇಂತಹ ಶಿಬಿರಗಳ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಶಿಬಿರದಲ್ಲಿ ಕಣ್ಣಿನ ಪೊರೆ ಆಪರೇಷನ್, ಕಣ್ಣಿನ ಶಸ್ತ್ರ ಚಿಕಿತ್ಸೆ, ಕಣ್ಣಿನಲ್ಲಿ ಅಳವಡಿಸುವ ಲೈನ್ಸ್, ಕಣ್ಣು ಸೋರುವಿಕೆ ಸೇರಿದಂತೆ ವಿವಿಧ ತಪಾಸಣೆ ನಡೆಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿಗೆ ಕಳುಹಿಸಲಾಯಿತು. ಉಚಿತವಾಗಿ ಕನ್ನಡಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗೌರಿ ದೇವಿ, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಮಹೇಂದ್ರ ಸಿಂಗ್ ಕಾಳಪ್ಪ, ಲಯನ್ಸ್ ಗ್ರೀನ್ ಲ್ಯಾಂಡ್ ಮಾಜಿ ಅಧ್ಯಕ್ಷ ಕೆ. ರಾಜೇಶ್ ಕುಮಾರ್, ವಿವೇಕಾನಂದ ಶಿಕ್ಷಣ ಸಂಸ್ಥೆಯ ಪ್ರಕಾಶ್, ಅರವಿಂದ್ ಕಣ್ಣಿನ ಆಸ್ಪತ್ರೆಯ ಡಾ.ವಿಜಯ್, ನಿವೃತ್ತ ಪ್ರಾಧ್ಯಾಪಕ ಗುರುಬಸವರಾಜು, ಡಾ. ಪುಟ್ಟಬಸಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.