ನಂಜನಗೂಡು : ದಾಂಪತ್ಯ ಪ್ರೀತಿಯನ್ನು ಜೋಪಾನ ಮಾಡಿಕೊಂಡಿದ್ದ ಹಿರಿಯ ಜೋಡಿ ಸಾವಿನಲ್ಲೂ ಒಂದಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 75 ವರ್ಷದ ಭಾಗ್ಯಮ್ಮ ಮತ್ತು 80 ವರ್ಷದ ರಂಗಸ್ವಾಮಿ ಅಲಿಯಾಸ್ ಎಳನೀರು ಕರಿಯಯ್ಯ ಒಂದೇ ದಿನದಲ್ಲಿ ಜೊತೆಯಾಗಿ ಅಸುನೀಗಿದ ದಂಪತಿಯಾಗಿದ್ದಾರೆ.
ರಂಗಸ್ವಾಮಿಯವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲದಿನಗಳಿಂದ ಇವರಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ರಂಗಸ್ವಾಮಿಯವರು ಹೆಚ್ಚುದಿನ ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ.
ಇದರಿಂದ ಚಿಂತೆಗೀಡಾಗಿದ್ದ ಭಾಗ್ಯಮ್ಮ ಆಸ್ಪತ್ರೆಯಿಂದ ಮೊನ್ನೆ ಮನೆಗೆ ವಾಪಸ್ಸಾಗಿದ್ದರು. ರಾತ್ರಿ ಮಲಗಿದವರು ಬೆಳಿಗ್ಗೆ ಮೇಲೇಳಲಿಲ್ಲ. ಸ್ವಾಭಾವಿಕವಾಗಿಯೇ ಸಾವನ್ನಪ್ಪಿದ್ದರು. ಇತ್ತ ಪತ್ನಿ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಂಗಸ್ವಾಮಿಯವರು ಡಿಸ್ಟಾರ್ಜ್ ಮಾಡಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ.
ಹೆಂಡತಿಯ ಅಗಲಿಕೆಯ ನೋವಿನಿಂದ ಆಘಾತಕ್ಕೊಳಗಾಗಿದ್ದ ರಂಗಸ್ವಾಮಿ ಹೆಂಡತಿಯ ಶವದ ಮುಂದೆಯೇ ಪ್ರಾಣ ಬಿಟ್ಟಿದ್ದಾರೆ. ದಂಪತಿಯ ಮೃತದೇಹಗಳ ಅಂತ್ಯಕ್ರಿಯೆಯನ್ನು ಗ್ರಾಮದ ಸ್ಮಶಾನದಲ್ಲಿ ನೆರವೇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಕಳಲೆ ಕೇಶವಮೂರ್ತಿ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದ್ದಾರೆ.