ಬೀದರ್: ಮೂವರು ಉಪ ಮುಖ್ಯಮಂತ್ರಿಗಳ ನೇಮಕ ವಿಷಯದಲ್ಲಿ ರಾಜ್ಯಕ್ಕೆ ಒಳ್ಳೆಯದಾಗುವಂತ ರೀತಿಯಲ್ಲಿ ನಮ್ಮ ಸರ್ಕಾರ ತೀರ್ಮಾನ ಮಾಡುತ್ತದೆ. ಸರ್ಕಾರದ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ರವಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವರು ಡಿಸಿಎಂಗಳ ಬಗ್ಗೆ ಪಕ್ಷದ ವರಿಷ್ಠರು, ಸಿಎಂ ಸಿದ್ದರಾಮಯ್ಯ ಮತ್ತು ಸಿಎಲ್ ಪಿ ನಾಯಕರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ನನ್ನ ಬೆಂಬಲವಿದೆ ಎಂದರು.
ಈಗಾಗಲೇ ನಮ್ಮ ಸರ್ಕಾರ ಟೇಕಾಫ್ ಆಗಿ ಆಗಿದೆ. ಹಲವಾರು ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೂಡ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳಿಂದ 55 ಸಾವಿರ ಕೋಟಿ ಹೋಗುತ್ತದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡಿದ್ದರು, ರಾಜ್ಯದ ಅಭಿವೃದ್ಧಿ ಮಾಡಲು ಆಗಲ್ಲ ಎಂದು ಹೇಳುತ್ತಿದ್ದರು. ಆದರೆ, ಈಗ ಅಭಿವೃದ್ಧಿ ಆಗುತ್ತಲ್ಲವೇ ಎಂದು ಪ್ರಶ್ನಿಸಿದ ಸಚಿವ ಖಂಡ್ರೆ, ವಿಪಕ್ಷ ನಾಯಕನನ್ನು ಮಾಡಲು ಸಾಧ್ಯವಾಗದ ಬಿಜೆಪಿ ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.