ಮೈಸೂರು: ಗ್ರಾಮದ ಬಳಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನ ಸೆರೆಹಿಡಿಯಲು ಮೂರು ದಿನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯವರು ಹುಲಿ ಸಿಗದೆ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿದ್ದಾರೆ.
ಹೆಚ್.ಡಿ ಕೋಟೆ ತಾಲೂಕಿನ ನಾಗನಹಳ್ಳಿ ಬಳಿಯ ರೈತರ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಒಂದುವರೆ ವರ್ಷದ ಹುಲಿಯನ್ನ ಸೆರೆ ಹಿಡಿಯಲು ಕಳೆದ ಭಾನುವಾರದಿಂದ ಸುಮಾರು 250ಕ್ಕೂ ಹೆಚ್ಚು ಮಂದಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಸಾಕಾನೆಗಳಾದ ಅಭಿಮನ್ಯು ಹಾಗೂ ಭೀಮಾ ನೇತೃತ್ವದಲ್ಲಿ ಕಾರ್ಯಚರಣೆಗೆ ಬಳಸಿಕೊಳ್ಳಲಾಗಿತ್ತು.
ಭಾನುವಾರ ಸಂಜೆ ಕಾಣಿಸಿಕೊಂಡಿದ್ದ ಹುಲಿಯನ್ನ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವುದು ಬೇಡ ಎಂಬ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಹುಲಿಯನ್ನ ಕಾಡಿಗೆ ಓಡಿಸಲು ಪ್ರಯತ್ನಿಸಲಾಯಿತು. ಆದರೆ ಅಂದು ಕತ್ತಲಾದರಿಂದ ಕಾರ್ಯಾಚರಣೆಯನ್ನ ಮೊಟಕುಗೊಳಿಸಿ ನಂತರ ಸೋಮವಾರ ಮತ್ತು ಮಂಗಳವಾರ ಸುತ್ತಮುತ್ತ ಹುಲಿ ಸೆರೆಗೆ ಕಾರ್ಯಚರಣೆ ನಡೆಸಿದರು ಹುಲಿ ಸಿಗದ ಹಿನ್ನಲ್ಲೆಯಲ್ಲಿ ಹುಲಿ ಕಾಡಿಗೆ ಮರಳಿರಬಹುದು ಎಂದು ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲಾಗಿದೆ ಎಂದು ಹಿರಿಯ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.