ಮೈಸೂರು: ನಗರದ ಎನ್ ಆರ್ ಮೊಹಲ್ಲಾ ವಾರ್ಡ್ 15ಕ್ಕೆ ಸೇರಿದ ಗಣೇಶನಗರದ ಮುಖ್ಯ ರಸ್ತೆಯಲ್ಲಿರುವ ಹಿಂದು ರುದ್ರಭೂಮಿ’ ಗೆ ಮೀಸಲಿರಿಸಿರುವ ಜಾಗದಲ್ಲಿ ವ್ಯಾಪಾರಿ ಮಳಿಗೆ ನಿರ್ಮಿಸಲು ಮುಡಾ ಅಧಿಕಾರಿಗಳು ಇತ್ತೀಚೆಗೆ ಸರ್ವೆ ಮಾಡಿಸಿರುವುದು ಸ್ಥಳೀಯರನ್ನು ಕೆರಳಿಸಿದೆ.
ಸರ್ವೆ ಮಾಡುವಾಗ ಸ್ಥಳೀಯರು ಅಧಿಕಾರಿಯನ್ನು ವಿಚಾರಿಸಿದ್ದಾರೆ. ಆಗ ಅಭಿಯಂತರ ಮೋಹನ್ ಅವರು ಈ ನಿವೇಶನದಲ್ಲಿ ಮುಡಾ ವ್ಯಾಪಾರಿ ಮಳಿಗೆ ನಿರ್ಮಾಣ ಮಾಡಲಾಗುವುದು. ಪ್ರಾಧಿಕಾರದ ಅಧ್ಯಕ್ಷರ ಆದೇಶದ ಮೇರೆಗೆ ಸರ್ವೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾದ ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಹೋರಾಟಗಾರರಾದ ಎಂ.ಎನ್.ಮಹದೇವು ಅವರು ಈ ಸಂಬಂಧವಾಗಿ ಶಾಸಕರು, ಜಿಲ್ಲಾಧಿಕಾರಿ, ಮುಡಾ ಹಾಗೂ ಪಾಲಿಕೆ ಆಯುಕ್ತರು ಮತ್ತು ಪಾಲಿಕೆಯ ಮುಡಾ ಸದಸ್ಯರಿಗೆ ಪತ್ರ ಬರೆದಿದ್ದಾರೆ. ಈ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮೊದಲು ಇದರ ಹಿನ್ನೆಲೆ ತಿಳಿದುಕೊಂಡು ಸುಮಾರು 21 ಸಮುದಾಯಗಳಿಗೆ ನ್ಯಾಯ ಒದಗಿಸಬೇಕೆಂದು ಕೋರಿದ್ದಾರೆ.
ಶತಮಾನಕ್ಕೂ ಹಳೆಯದಾದ ಈ ರುದ್ರಭೂಮಿಯಲ್ಲಿ ಸಮೀಪದ 21 ಬಡಾವಣೆಗಳ ವಿವಿಧ ಸಮುದಾಯಗಳವರಾದ ರಜಪೂತ್,ನಾಯಕರು, ಕುಂಬಾರರು, ಉಪ್ಪಾರರು, ಒಕ್ಕಲಿಗರು, ಕಮ್ಮಾರರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಬೋವಿ, ಗಂಗಟಕಾರ, ಸವಿತ ಸಮಾಜ, ಮಡಿವಾಳ, ದರ್ಜಿ, ಕೊರವ, ಉಳವ, ಈಡಿಗ ಮುಂತಾದ ಅನೇಕ ಜಾತಿ ಮತಕ್ಕೆ ಸೇರಿದವರು ಇಲ್ಲಿ ಶವ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ.
ಸ್ಮಶಾನದ ಸಮೀಪದ ರಸ್ತೆ ಅಗಲೀಕರಣದ ನಂತರ ಉಳಿದ ಭೂಮಿಯನ್ನು ಹಿಂದೂ ರುದ್ರಭೂಮಿಗೇ ನೀಡಬೇಕೆಂದು ತೀರ್ಮಾನಿಸಲಾಗಿದ್ದರೂ 1980ರಲ್ಲಿ ಪ್ರಾಧಿಕಾರವು ಜೆ.ಕೆ.ಟ್ರಸ್ಟ್ ಮತ್ತು ಇತರರು ಸೇರಿದಂತೆ 8 ಮಂದಿಗೆ ಹಂಚಿಕೆ ಮಾಡಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ಈ ಭೂಮಿಯನ್ನು ರುದ್ರಭೂಮಿಗೇ ನೀಡಬೇಕೆಂದು ಒತ್ತಾಯಿದ್ದರಿಂದ ಅಂದಿನ ವಿಭಾಗೀಯ ಅಧಿಕಾರಿ ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ವಿಶ್ವನಾಥ್, ಸ್ಥಳೀಯ ಶಾಸಕ ತನ್ವೀರ್ ಸೇಠ್ ಹಾಗೂ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರೂ ಕೂಡ ರಸ್ತೆ ಅಭಿವೃದ್ಧಿಯ ನಂತರ ಉಳಿದಿರುವ ಬಾಕಿ ತುಂಡು ಭೂಮಿಯನ್ನು ಹಿಂದೂ ರುದ್ರಭೂಮಿಗೇ ನೀಡುವಂತೆ ಆದೇಶ ಮಾಡಿದ್ದರು.
ಆದರೆ ಈವರೆಗೂ ಆ ನಿವೇಶನಕ್ಕೆ ಕಾಂಪೌಂಡ್ ಹಾಕದ ಕಾರಣ ಯಾರು ಯಾವಾಗ ಈ ಜಾಗವನ್ನು ಲಪಟಾಯಿಸುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಸುಮಾರು ನಾಲ್ವತ್ತು ವರ್ಷಗಳಿಂದ ಪ್ರಾಧಿಕಾರದ ಯಾವ ಅಧ್ಯಕ್ಷರು ಈ ನಿವೇಶನಕ್ಕೆ ಕಣ್ಣು ಹಾಕಲಿಲ್ಲ. ಆದರೆ ಈಗ ಹಿಂದುತ್ವ ರಕ್ಷಕರು ಎಂದೇ ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಈ ನಿವೇಶನದಲ್ಲಿ ವ್ಯಾಪಾರಿ ಮಳಿಗೆ ಮಾಡುವ ಉದ್ದೇಶದಿಂದ ತಮ್ಮ ಅಧಿಕಾರಿಗಳಿಗೆ ಸರ್ವೆ ಮಾಡಿ ವರದಿ ನೀಡಲು ಸೂಚಿಸಿದ್ದಾರೆ.
ಈ ವಿಷಯ ತಿಳಿದು ಎಚ್ಚೆತ್ತುಕೊಂಡಿರುವ ಸ್ಥಳೀಯರು ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲು ಸನ್ನದ್ದರಾಗುತ್ತಿರುವುದಲ್ಲದೆ, ರುದ್ರಭೂಮಿಗೆ ಖಾಲಿ ನಿವೇಶನ ಸೇರಿಸಿಯೇ ಕಾಂಪೌಂಡ್ ನಿರ್ಮಿಸಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ. ಹೋರಾಟದಲ್ಲಿ ಅಂದು ಭಾಗವಹಿಸಿದ್ದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಇಂದಿಗೂ ನಾಲ್ವತ್ತು ವರ್ಷಗಳ ಹಿಂದೆ ನಡೆದ ಹೋರಾಟವನ್ನು ಮೆಲುಕು ಹಾಕುತ್ತಾ ಯಾವುದೇ ಕಾರಣಕ್ಕೂ ಈ ನಿವೇಶನದಲ್ಲಿ ವ್ಯಾಪಾರಿ ಮಳಿಗೆ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ಈ ಕುರಿತು ಶಾಸಕರಾದ ತನ್ವೀರ್ ಸೇಠ್ ಅವರನ್ನು ಸಂಪರ್ಕಿಸಿದಾಗ, ಈ ನಿವೇಶನದ ಬಗ್ಗೆ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಾನೂ ಕೂಡ ಅಧಿಕಾರಿಗಳಿಗೆ ಅನೇಕ ವರ್ಷಗಳಿಂದ ಪತ್ರ ಬರೆಯುತ್ತಲೇ ಇದ್ದೇನೆ. ಈ ಬಾರಿಯೂ ಪತ್ರದ ಮೂಲಕ ವಿವರವಾಗಿ ತಿಳಿಸಿದ್ದೇನೆ. ನ.20ರ ಪ್ರಾಧಿಕಾರದ ಸಭೆಯಲ್ಲಿ ವಿಷಯ ಮಂಡಿಸಲು ತಿಳಿಸಿದ್ದೇನೆ ಎಂದು ಹೇಳಿದರು.