ಮೈಸೂರು: ನಿನ್ನೆ ಜಾಮೀನು ರಹಿತ ವಾರೆಂಟ್ ಹಿನ್ನಲೆಯಲ್ಲಿ ಕೋರ್ಟ್ ಗೆ ಶರಣಾದ ಸಚಿವರ ಪುತ್ರನಿಗೆ ಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡುತ್ತಿದ್ದಂತೆ ಕೋರ್ಟ್ ಹಿಂಬಾಗಿಲಿನ ಮೂಲಕ ಮಾಧ್ಯಮದವರ ಕಣ್ತಪ್ಪಿಸಿ ಓಡಿ ಹೋದ ಘಟನೆ ನಡೆದಿದೆ.
ಮರಳು ಗಣಿಗಾರಿಕೆಗೆ ಪರವಾನಿಗೆ ನೀಡಲು ಲಂಚಕ್ಕೆ ಒತ್ತಡ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಸತತ ಗೈರಾಗುತ್ತಿದ್ದ ಸಚಿವ ಮಹದೇವಪ್ಪ ಪುತ್ರನಿಗೆ ನಿನ್ನೆ 3ನೇ ಸೆಷನ್ಸ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನಲ್ಲೆಯಲ್ಲಿ ಬೇರೆ ಕಾರಿನಲ್ಲಿ ಕೋರ್ಟ್ ಗೆ ಬಂದು ಶರಣಾದ ಸಚಿವರ ಪುತ್ರ ಸುನೀಲ್ ಬೋಸ್ಗೆ ನ್ಯಾಯಾಧೀಶ ಎಸ್.ಸುದೀಂದ್ರನಾಥ್ 1 ಲಕ್ಷ ಬಾಂಡ್ ಶೂರಿಟಿ ಮತ್ತು ಇಬ್ಬರು ವ್ಯಕ್ತಿಗಳ ಜಾಮೀನು ನೀಡಬೇಕೆಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದರು.
ನ್ಯಾಯಾಲಯದ ಆವರಣದಲ್ಲಿ ಕುಳಿತಿದ್ದ ಸಚಿವರ ಪುತ್ರ ನ್ಯಾಯಾಲಯದ ಮುಂಭಾಗದಲ್ಲಿ ಮಾಧ್ಯಮಗಳ ಕ್ಯಾಮಾರಗೆ ಹೆದರಿ ನ್ಯಾಯಾಲಯದ ಹಿಂಭಾಗದ ಗೇಟ್ ಮೂಲಕ ಓಡಿ ಹೋಗಿ ಬೇರೆ ಕಾರಿನಲ್ಲಿ ಹೊರಟು ಹೋದರು.