ಮೈಸೂರು: ಅರಮನೆಯ ಸೊಬಗನ್ನು ಹೆಚ್ಚಿಸುವ ಸಲುವಾಗಿ ಮತ್ತು ಪ್ರವಾಸಿಗರನ್ನು ಸೆಳೆಯಲು ಹೊಸವರ್ಷದಲ್ಲಿ ಅರಮನೆಯ ಆವರಣದಲ್ಲಿ ಪ್ರಥಮ ಬಾರಿಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದರು.
ಅರಮನೆ ಶ್ವೇತ ವರಾಹ ದ್ವಾರದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಹೊಸ ವರ್ಷದ ಪ್ರಯುಕ್ತ ಅರಮನೆ ಆವರಣದಲ್ಲಿ ಐದು ದಿನಗಳು ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಫಲಪುಷ್ಪಗಳ ಸಿಂಗಾರವನ್ನು ನುರಿತ ಕಲಾವಿದರಿಂದ ಸಿದ್ಧಪಡಿಸಲಾಗಿದೆ ಎಂದರು.
ಫಲಪುಷ್ಪಪ್ರದರ್ಶನದಲ್ಲಿ ಸುಮಾರು 7 ಸಾವಿರ ಹೂಕುಂಡಗಳನ್ನು ಜೋಡಿಸಲಾಗಿದೆ. ಕಾಶ್ಮೀರ ಮತ್ತು ಕಲ್ಕತ್ತಾ, ಉದಕಮಂಡಲದಿಂದ ವಿವಿಧ ಬಗೆಯ ಹೂಗಳನ್ನು ಆಮದು ಮಾಡಿಕೊಂಡು ಸಿಂಗಾರಗೊಳಿಸಲಾಗಿದೆ.
ದರ್ಬಾರ್ ಹಾಲ್ ನಲ್ಲಿ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಜೊತೆಗೆ ದಳಪತಿ ದ್ವಾರಪಾಲಕರಂತೆ ನಿಂತಿರುವ ದೃಶ್ಯ ಹಾಗೂ ಆ ಪ್ರತಿಮೆಗಳಿಗೆ ಬಣ್ಣ ಬಣ್ಣದ ಹೂಗಳಿಂದ ಸಿಂಗರಿಸಲಾಗಿದೆ. ಅಂಬಾರಿ ಮೇಲಿರುವ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಕಾವಲಿಗೆ ಸಿಂಹಗಳು ಘರ್ಜಿಸುವ ರೀತಿಯ ಪ್ರತಿಮೆ ಮತ್ತು ಅಶ್ವದಳ ಸೇನಾ ಭಟರನ್ನು ಇಲ್ಲಿ ಕಾಣಬಹುದಾಗಿದೆ.
ದಪ್ಪ ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಗೂ ಟೊಮೋಟೊ ಹಣ್ಣಿನಿಂದ ನೃತ್ಯ ಮಯೂರಿಯೆಂದೇ ಕರೆಯುವ ನವಿಲು, ಗುಲಾಬಿ ಹೂವಿನಿಂದ ಡಾಲ್ಫೀನ್, ಸಂಗೀತ ವಾದ್ಯಗಳಾದ ವೀಣೆ, ಗಿಟಾರ್ ಹಾಗೂ ತಬಲವನ್ನು ಪಿಂಕ್, ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿಗೆ ಹೂವಿನಿಂದ ಅಲಂಕರಿಸಿ ಆಕರ್ಷಕವಾಗಿ ಕಾಣುವಂತೆ ರಚಿಸಲಾಗಿದೆ. ಹಸಿರು ಗಿಡದ ಬಳ್ಳಿಯಿಂದ ಡೈನೋಸಾರ್, ವಾದ್ಯ ನುಡಿಸುವವರ ತಂಡ ಸೇರಿದಂತೆ ಔಷಧೀಯ ಗುಣಗಳನ್ನು ಹೊಂದಿರುವ ಸಸಿಗಳನ್ನು ಇಲ್ಲಿ ಆಕರ್ಷಣೀಯವಾಗಿ ಪ್ರದರ್ಶನಕ್ಕಿಡಲಾಗಿದ್ದು, ಆರೇಳು ಅಡಿಯ ಫಲಕದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಸಾಧನೆಗಳಾದ ಕನ್ನಂಬಾಡಿ ಕಟ್ಟೆ, ಶಿವನ ಸಮುದ್ರ ವಿದ್ಯುತ್ ಉತ್ಪಾದನೆ, ಮೈಸೂರು ವಿಶ್ವವಿದ್ಯಾನಿಲಯ, ಭದ್ರಾವತಿ ಕಾರ್ಖಾನೆ ಹಾಗೂ ಮೈಸೂರು ಆಕಾಶವಾಣಿಯ ಚಿತ್ರಗಳನ್ನು ಬರೆಯಲಾಗಿದೆ.