ಮೈಸೂರು: ನಗರದ ಚಾಮುಂಡಿಬೆಟ್ಟದ ಪಾದಕ್ಕೆ ತೆರಳುವ ರಸ್ತೆಯಲ್ಲಿರುವ ಹೂಳುವ ರುದ್ರಭೂಮಿಗೆ ಸೇರಿದ ಕಲ್ಯಾಣಿ ನಡುವೆ ಶಿವನ ಮೂರ್ತಿಯನ್ನು ಹೊತ್ತಿದ್ದ ಗೋಪುರ ಕುಸಿದು ಬಿದ್ದಿರುವ ಘಟನೆ ನಡೆದಿದ್ದು ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಮಶಾನದಲ್ಲಿ ಪುರಾತನದ್ದು ಎನ್ನಲಾದ ಕಲ್ಯಾಣಿಯಿದ್ದು ಈ ಕಲ್ಯಾಣಿ ಸೇರಿದಂತೆ ಸ್ಮಶಾನದಲ್ಲಿ ಕುರುಚಲು ಕಾಡುಗಳು ತುಂಬಿವೆ. ಈ ನಡುವೆ ರುದ್ರಭೂಮಿಗೆ ಪ್ರವೇಶ ನೀಡುವ ಪ್ರವೇಶ ದ್ವಾರದ ಬಳಿಯೇ ಕಲ್ಯಾಣಿಯಿದ್ದು ನಿರ್ವಹಣೆ ಕೊರತೆಯಿಂದ ಗಿಡಗಂಟಿಗಳು ಬೆಳೆದಿದ್ದವು. ಇದನ್ನು ಸ್ವಚ್ಛಗೊಳಿಸುವ ಮೂಲಕ ಕಲ್ಯಾಣಿ ರಕ್ಷಣೆಗೆ ಯುವಬ್ರಿಗೇಡ್ ನ ಯುವಕರ ತಂಡ ಶ್ರಮದಾನದ ಮೂಲಕ ಮುಂದಾಗಿದ್ದರು. ಹತ್ತಕ್ಕೂ ಹೆಚ್ಚಿನ ಜನರು ಎರಡು ದಿನಗಳ ಸ್ವಚ್ಛತಾ ಕಾರ್ಯ ನೆರವೇರಿಸಿದ್ದರು. ಕಲ್ಯಾಣಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆದು, ಮೆಟ್ಟಿಲುಗಳನ್ನು ದುರಸ್ತಿ ಮಾಡಿದ್ದರು. ಕಲ್ಯಾಣಿ ನಡುವೆ ಗೋಪುರವಿದ್ದು ಅದರಲ್ಲಿ ಶಿವನಮೂರ್ತಿಯನ್ನು ಕಳೆದ ಮೂರು ದಶಕಗಳ ಹಿಂದೆ ಪ್ರತಿಷ್ಠಾಪಿಸಲಾಗಿತ್ತು.
ಇದನ್ನು ಕಾಲಕಾಲಕ್ಕೆ ದುರಸ್ತಿಗೊಳಿಸದ ಕಾರಣ ಸಂಪೂರ್ಣ ಶಿಥಿಲಾವಸ್ಥೆಗೆ ಒಳಗಾಗಿತ್ತು. ಇದೀಗಾ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಲ್ಲದೆ, ಗೋಪುರವನ್ನು ದುರಸ್ತಿಪಡಿಸುವ ಆಲೋಚನೆಯಲ್ಲಿರುವಾಗಲೇ ಅದು ಕುಸಿದು ಬಿದ್ದಿದೆ. ಒಂದು ವೇಳೆ ಶ್ರಮದಾನ ಮಾಡುವ ವೇಳೆ ಗೋಪುರ ಕುಸಿದು ಬಿದ್ದಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಆದರೆ ದೇವರ ದಯೆಯಿಂದ ಯಾರಿಲ್ಲದ ವೇಳೆ ಕುಸಿದು ಬಿದ್ದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.