ಕೆ.ಆರ್.ಪೇಟೆ: ಪಕ್ಷಿಗಳು ಬೀಡುಬಿಟ್ಟು ಸಂತಾನೋತ್ಪತ್ತಿ ಮಾಡುತ್ತಿದ್ದ ಮರಗಳನ್ನು ಅಧಿಕಾರಿಗಳು ಏಕಾಏಕಿ ನೆಲಕ್ಕುರುಳಿಸಿದ್ದರಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿರುವ ಘಟನೆ ಪಟ್ಟಣದ ಕಾವೇರಿ ನಿಗಮದ ಕಚೇರಿಯ ಆವರಣದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ಕಾವೇರಿ ನೀರಾವರಿ ನಿಗಮದ ಹೇಮಾವತಿ ಜಲಾಶಯ ಯೋಜನೆಯ ನಂ.03ರ ಕಚೇರಿ ಮತ್ತು ವಸತಿ ಸಮುಚ್ಛಯವಿರುವ ಟೌನ್ ಕ್ಲಬ್ ವೃತ್ತಕ್ಕೆ ಆವರಿಸಿಕೊಂಡಂತೆ ಸುಮಾರು 50ಕ್ಕೂ ಹೆಚ್ಚು ಮರಗಳಲ್ಲಿ ಸಾವಿರಾರು ಪಕ್ಷಿಗಳು ಹಾರಲು ಸಾಧ್ಯವಾಗದ ಮರಿಪಕ್ಷಿಗಳೊಂದಿಗೆ ಆಶ್ರಯ ಪಡೆದುಕೊಂಡು ಜೀವಿಸುತ್ತಿದ್ದವು. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಯಾವುದೇ ಮುಂದಾಲೋಚನೆಯಿಲ್ಲದೆ ಸುಮಾರು 30ರಿಂದ 40 ಮರಗಳನ್ನು ಕಡಿದು ಹಾಕಿದ್ದು ಈ ವೇಳೆ ಮರದಲ್ಲಿ ಗೂಡುಕಟ್ಟಿಕೊಂಡಿದ್ದ ಕೆಲವು ಪಕ್ಷಿಗಳು ಹಾರಿ ಜೀವ ಉಳಿಸಿಕೊಂಡರೆ, ರೆಕ್ಕೆಪುಕ್ಕ ಹುಟ್ಟದ ಮರಿಗಳು ನೆಲಕ್ಕೆ ಬಿದ್ದು ಸಾವನ್ನಪ್ಪಿದರೆ, ಇನ್ನು ಕೆಲವು ಮರಿಗಳು ಗೂಡಿಲ್ಲದೆ ಬಿಸಿಲಿನಲ್ಲಿ ನರಳಿ ಸಾಯುವ ಮೂಲಕ ಪಕ್ಷಿಗಳ ಮಾರಣ ಹೋಮವೇ ನಡೆದು ಹೋಗಿದೆ.
ಮರಗಳನ್ನು ಕಡಿದು ನೆಲಕ್ಕುರುಳಿಸಿ ಕಾರಣ ಎಳೆಯ ಪಕ್ಷಿಗಳು ಆಹಾರವಿಲ್ಲದೆ ಮಧ್ಯಾಹ್ನದಿಂದ ಸಂಜೆಯವರೆವಿಗೂ ಚೀರಾಡುತ್ತಾ ಸಾಯುತ್ತಿದ್ದ ದೃಶ್ಯ ಕಂಡು ಬಂತು. ಇದರಿಂದ ಸಾರ್ವಜನಿಕರು ಮರಗಳನ್ನು ಕಡಿಯುವ ಮೂಲಕ ನೂರಾರು ಪಕ್ಷಿಗಳ ಸಾವಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಅರಣ್ಯ ಇಲಾಖೆಯ ಅಧಿಕಾರಿಗಳ ಪರವಾನಗಿ ಪಡೆಯದೇ ಮರಗಳನ್ನು ಕಡಿದು ಹಾಕಿದ ನೀರಾವರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದರು.
ಇನ್ನು ಪಕ್ಷಿ ಪ್ರಿಯ ಹಲವು ಸಾರ್ವಜನಿಕರು ಅಳಿದುಳಿದ ಸಣ್ಣ ಸಣ್ಣ ಪಕ್ಷಿಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಸಂರಕ್ಷಣೆಗೆ ಮುಂದಾದರು. ಆದರೆ ಮರಗಳನ್ನು ಕಡಿದು ಹಾಕಿ ಮಾನವೀಯತೆಯನ್ನು ಮರೆತು ಪಕ್ಷಿಗಳ ಸಾಮೂಹಿಕ ಸಾವಿಗೆ ಕಾರಣವಾದ ನೀರಾವರಿ ಅಧಿಕಾರಿಗಳು ಮಾತ್ರ ಕಚೇರಿಗೆ ಬೀಗಹಾಕಿ ಹೊರಟು ಹೋದ ದೃಶ್ಯ ಕಂಡು ಬಂತು.
ಈ ವಿಚಾರ ತಿಳಿಯುತ್ತಿದ್ದಂತೆ ತಾಲೂಕು ಅರಣ್ಯ ಇಲಾಖೆಯ ಅಧಿಕಾರಿಗಳಾದ ರವೀಂದ್ರ, ಉಪ ಅರಣ್ಯಾಧಿಕಾರಿ ರಾಘವೇಂದ್ರ ಮತ್ತಿತರರು ಭೇಟಿ ನೀಡಿ ಪಕ್ಷಿಗಳ ಮಾರಣ ಹೋಮಕ್ಕೆ ಕಾರಣವಾದ ಮತ್ತು ಪರವಾನಗಿಯಿಲ್ಲದೆ ಕಡಿದಿದ್ದ ಮರಗಳನ್ನು ವೀಕ್ಷಣೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅರಣ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ.