ಮೈಸೂರು: ಸೈಕೋ ಪತಿಯ ಕಿರುಕುಳವನ್ನು ತಾಳಲಾರದೆ ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ಅಲ್ಲೂ ನ್ಯಾಯ ಸಿಗದೇ ಈಗ ತಮಗೆ ರಕ್ಷಣೆ ಹಾಗೂ ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅಬ್ಬೂರು ಗ್ರಾಮದ ಶಹಿರಾಬಾನು(ಹೆಸರು ಬದಲಾಯಿಸಲಾಗಿದೆ), ಮಡಿಕೇರಿ ಜಿಲ್ಲೆಯ ಕೂಡ್ಲಿಪೇಟೆ ನಿವಾಸಿ ಸಾಧಿಕ್ ಪಾಷ ಎಂಬ ಸೈಕೋ ಪತಿಯಿಂದ ಕಿರುಕುಳಕ್ಕೊಳಗಾದ ಮಹಿಳೆ. ಕಳೆದ ನಾಲ್ಕು ವರ್ಷದ ಹಿಂದೆ ಹಾಸಿಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಾಧಿಕ್ ಪಾಷ ತಾನೊಬ್ಬ ಫರ್ನಿಷರ್ಸ್ ಅಂಗಡಿ ಮಾಲೀಕನೆಂದು ಹೇಳಿಕೊಂಡು ಅರ್ಫಿಯಾಭಾನು ಮದುವೆಯಾಗಿದ್ದಾನೆ. ಮದುವೆಯಾದ ಕೆಲವು ತಿಂಗಳಲ್ಲಿ ಈತನ ಬಣ್ಣ ಬಯಲಾಗಿದ್ದು ಬೇರೆಂದು ವ್ಯವಹಾರ ಮಾಡಲು ಹಣ ತರುವಂತೆ ಪತ್ನಿಯನ್ನೂ ನಿರಂತರವಾಗಿ ಪೀಡಿಸಿದ್ದಾನೆ.
ಅಷ್ಟೇ ಅಲ್ಲದೆ ಮದುವೆಯಾದ ಮೂರೇ ತಿಂಗಳಿಗೆ ನೀನು ಗರ್ಭೀಣಿಯಾಗಿಲ್ಲ. ನೀನು ಬಂಜೆ ನಾನು ಮಕ್ಕಳಿಗಾಗಿ ಮತ್ತೊಂದು ಮದುವೆಯಾಗುವುದಾಗಿ ಈಕೆಗೆ ಬೆದರಿಕೆ ಹಾಕಿದ್ದಾನೆ. ಆರು ತಿಂಗಳ ಬಳಿಕ ಗರ್ಭೀಣಿಯಾದ ಈಕೆಗೆ ‘ನನಗೆ ಮಗು ಬೇಡ ಮಗು ತೆಗೆಸಿಬೀಡು ಇಲ್ಲ ನನ್ನನ್ನೇ ಬಿಟ್ಟು ಬಿಡು’ ಎಂದು ಧಮ್ಕಿ ಹಾಕಿದ್ದಾನೆ. ಈತನ ಕಿರುಕುಳದ ನಡುವೆಯೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಎರಡೂವರೆ ವರ್ಷವಾಗಿದ್ದು, ಈಗಲೂ ಸಹ ನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ಗಾಂಜಾ, ಮಟ್ಕ, ಕುಡಿತಕ್ಕೆ ದಾಸನಾಗಿರುವ ಸಾಧಿಕ್ ಪಾಷ ನಿತ್ಯ ಕುಡಿದು ಬಂದು ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈತನ ಹಲ್ಲೆಯಿಂದ ರೋಸಿ ಹೋದ ಈಕೆ ಹಲವಾರು ಬಾರಿ ತವರು ಮನೆ ಸೇರಿದ್ದಾಳೆ. ಕೊನೆಗೆ ಗ್ರಾಮಸ್ಥರ ರಾಜೀ ಪಂಚಾಯ್ತಿ ಬಳಿಕ ಮತ್ತೆ ಗಂಡನ ಮನೆಗೆ ಬಂದಿದ್ದಾಳೆ.
ಆದರೆ ಮಾಚ್ 20 ರಂದು ಪತಿ ಸಾಧಿಕ್, ಅತ್ತೆ ಅಕ್ಬರ್ ಬಾನು, ನಾದಿನಿಯರಾದ ಅಸ್ಮಾಭಾನು, ರೇಷ್ಮಾಭಾನು, ಪತಿಯ ತಮ್ಮ ಅತಿಕ್ ಪಾಷ ಎಲ್ಲರ ಒಟ್ಟಿಗೆ ಸೇರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಎಲ್ಲರ ಹಲ್ಲೆಯಿಂದ ಶಹಿರಾಬಾನು ಮೂರ್ಚೆ ತಪ್ಪಿದ್ದು ಇದರಿಂದ ಗಾಬರಿಗೊಂಡ ಮನೆಯವರು ಮನೆಯಿಂದ ಹೊರಗೆ ಓಡಿ ಹೋಗಿದ್ದಾರೆ. ಎಚ್ಚರಗೊಂಡ ಮೇಲೆ ತವರುಮನೆ ಸೇರಿಕೊಂಡಿದ್ದು ಪಿರಿಯಾಪಟ್ಟಣ ತಾಲೂಕಿನ ಸಂತೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಯತ್ನ ದೂರು ದಾಖಲಿಸಿದ್ದಾರೆ.
ಆದರೆ ಪ್ರಕರಣ ದಾಖಲಿಸಿ ಇಷ್ಟು ದಿನಗಳೇ ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ನ್ಯಾಯ ದೊರಕಿಸಿಕೊಡುವಂತೆ ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.