ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಕ್ಕೆ ಅವರ ಅಭಿಮಾನಿಯೊಬ್ಬರು ಸೌದಿ ಅರೇಬಿಯಾದಿಂದ ಬಂದು ತಮ್ಮ ಹರಕೆ ತೀರಿಸಿದ್ದಾರೆ. ಮೈಸೂರು ತಾಲೂಕು ಸಿದ್ಧರಾಮನಹುಂಡಿ ಗ್ರಾಮದ ಸಿದ್ದರಾಮೇಶ್ವರ ದೇವಾಲಯಕ್ಕೆ ಚಿನ್ನಲೇಪಿತ ಬೆಳ್ಳಿಯ ನಾಗಾಭರಣ ನೀಡಿ ಹರಕೆ ಸಲ್ಲಿಸಿದ್ದಾರೆ. ದೇವೇಗೌಡನಹುಂಡಿ ನಿವಾಸಿ ಮಹದೇವರ ಪುತ್ರ ಹಾಗೂ ಅನಿವಾಸಿ ಭಾರತೀಯ ರವಿ ಮಹದೇವ ಅವರು ಹರಕೆ ತೀರಿಸಿದ ಅಭಿಮಾನಿ.
ರವಿ ಮಹದೇವ ಅವರು ಸದ್ಯ ಸೌದಿ ಅರೇಬಿಯಾದಲ್ಲಿ ವಾಸಿಯಾಗಿದ್ದು, ಸಾಗರೋತ್ತರ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಹಾಗೂ ಜಂಟಿ ಕಾರ್ಯದರ್ಶಿ ಆಗಿದ್ದಾರೆ. ಇವರು ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದು, ಅದರಂತೆ ಅವರು ಈಗ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ, ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ತಮ್ಮ ಹರಕೆ ಸೇವೆ ಜೊತೆಗೆ ವಿಶೇಷ ಅಭಿಷೇಕ ಪೂಜೆ ನೆರವೇರಿಸಿದ್ದಾರೆ.