ರಾಜ್ಯಕ್ಕೆ ಒಂದು ಫಿಲ್ಮ್ಸಿಟಿ ಬೇಕು ಎಂಬುದು ಚಿತ್ರರಂಗದವರ ಬಹುವರ್ಷಗಳ ಕೋರಿಕೆ. ಆದರೆ, ಅದು ಈವರೆಗೆ ಈಡೇರಿಲ್ಲ. ಸರ್ಕಾರಗಳು ಬದಲಾದಂತೆ ಇದನ್ನು ನಿರ್ಮಾಣ ಮಾಡಲು ನಿಗದಿಪಡಿಸಿದ ಜಾಗಗಳು ಕೂಡ ಬದಲಾಗುತ್ತಲೇ ಬಂದವು.
ಈ ಬಾರಿ ಬಜೆಟ್ನಲ್ಲಿ ಮತ್ತೆ ಇದರ ಪ್ರಸ್ತಾಪ ಆಗಿದೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಘೋಷಿಸಿದ್ದಾರೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಯನ್ನು ನಿರ್ಮಿಸಲು ಈ ಬಾರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ.
ಸಿನಿಮಾ ಕೆಲಸಗಳಿಗೆ ಚಿತ್ರ ನಗರಿ ಅತ್ಯಗತ್ಯ. ಸದ್ಯ ಹೈದರಾಬಾದ್ ಮೊದಲಾದ ಕಡೆಗಳಿಗೆ ತೆರಳಿ ಸೆಟ್ಗಳನ್ನು ನಿರ್ಮಿಸಿ ಶೂಟ್ ಮಾಡಲಾಗುತ್ತಿದೆ. ಕರ್ನಾಟಕದಲ್ಲೇ ಫಿಲ್ಮ್ ಸಿಟಿ ನಿರ್ಮಾಣ ಆದರೆ ಸಿನಿಮಾದವರು ಪರ ರಾಜ್ಯಕ್ಕೆ ತೆರಳುವುದು ತಪ್ಪಲಿದೆ. ಹೀಗಾಗಿ, ಅನೇಕ ವರ್ಷಗಳಿಂದ ಈ ಬೇಡಿಕೆ ಹಾಗೆಯೇ ಇದೆ.