ಮೈಸೂರು: ಸಿಲಿಂಡರ್ ಸ್ಪೋಟಗೊಂಡ ಮನೆಗೆ ಸಹಾಯ ಮಾಡುವ ನೆಪದಲ್ಲಿ ಬಂದು ಮನೆಯವರಿಂದ ಮೊಬೈಲ್ ಕದಿಯಲು ಯತ್ನಸಿದಾಗ ಪ್ರಶ್ನಿಸಿದ ಪೊಲೀಸರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ನಗರದ ದಟ್ಟಗಳ್ಳಿ 3 ಮೇನ್ 3 ಕ್ರಾಸ್ ವಿಜಯಲಕ್ಷ್ಮಿ ಎಂಬುವವರಿಗೆ ಸೇರಿದ ಮನೆಯೊಂದರಲ್ಲಿ ನಿನ್ನೆ ರಾತ್ರಿ ಸಿಲಿಂಡರ್ ಸ್ಪೋಟದಿಂದ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದು ಕುವೆಂಪುನಗರ ಠಾಣೆಯ ಪೊಲೀಸ್ ಪೇದೆ ಯುವರಾಜ್ ಮತ್ತು ಪೇದೆ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಆದರೆ ಇದೇ ವೇಳೆ ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದ ಮೂವರು ದರೋಡೆಕೋರರು ವಿಜಯಲಕ್ಷ್ಮಿಯವರಿಂದ ಮೊಬೈಲ್ ಕದಿಯಲು ಯತ್ನಿಸಿ ಅನುಚಿತವಾಗಿ ವರ್ತಿಸಿದ್ದಾರೆ.
ಅಲ್ಲದೆ ಇದನ್ನು ಪ್ರಶ್ನಿಸಿದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದು ಅವರನ್ನು ಬಂಧಿಸಿ ಪೊಲೀಸ್ ವ್ಯಾನ್ ನಲ್ಲಿ ಹಾಕಿದಾಗ ಕಾರಿನ ಗಾಜು ಒಡೆದುಕೊಂಡು ಪೊಲೀಸ್ ವ್ಯಾನ್ ಜಖಂಗೊಳಿಸಿ ಸ್ಥಳದಿಂದಲೇ ನಾಪತ್ತೆಯಾಗಿದ್ದಾರೆ. ಗಾಬರಿಗೊಂಡ ಪೊಲೀಸರು ಠಾಣೆಗೆ ವಿಷಯ ತಿಳಿಸಿ ಹೆಚ್ಚುವರಿ ಪೊಲೀಸರ ಸಹಾಯದಿಂದ ತಡರಾತ್ರಿಯೇ ದರೋಡೆಕೋರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದರೋಡೆಕೋರರು ಹಲ್ಲೆ ನಡೆಸಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬಂಧಿಸಿರುವ ಕುವೆಂಪುನಗರ ಠಾಣೆಯ ಪೊಲೀಸರು ರಾಮೃಕೃಷ್ಣ ನಗರದ ಚೇತನ್, ದಟ್ಟಗಳ್ಳಿಯ ಸಿದ್ದರಾಜು ಹಾಗೂ ಮಂಜುನಾಥ್ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.