ಶ್ರೀರಂಗಪಟ್ಟಣ: ಆಗಾಗ್ಗೆ ಮನೆಗೆ ಬರುತ್ತಿದ್ದ ಸ್ನೇಹಿತೆಯೊಂದಿಗೆ ಮಹಿಳೆಯೊಬ್ಬಳು ತೆರಳಿದ್ದು ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಆಕೆಯ ಪತಿ ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿರುವ ಘಟನೆ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಅಗ್ರಹಾರ ಗ್ರಾಮದ ನಿವಾಸಿ ದಿಲೀಪ್ ಎಂಬುವರ ಪತ್ನಿ ಪ್ರಿಯರ್ಶಿನಿ(22) ಎಂಬಾಕೆ ಗೆಳತಿಯೊಂದಿಗೆ ನಾಪತ್ತೆಯಾದ ಮಹಿಳೆ. ಈಕೆಗೆ ಮಗುವಿದ್ದು, ಮನೆಗೆ ಆಗಾಗ್ಗೆ ಸ್ನೇಹಿತೆ ಅವಿವಾಹಿತಳಾಗಿರುವ ಮಹಾದೇವಿ(31) ಎಂಬಾಕೆ ಬರುತ್ತಿದ್ದಳು ಎನ್ನಲಾಗಿದೆ. ಆ. 22ರ ಮಂಗಳವಾರದಂದು ಮನೆಗೆ ಬಂದ ಮಹಾದೇವಿ ತನ್ನೊಂದಿಗೆ ಬಟ್ಟೆ ತರಲು ಬಾ ಎಂದು ಪ್ರಿಯದರ್ಶಿನಿಯನ್ನು ಕರೆದೊಯ್ದಿದ್ದಾಳೆ. ಹಾಗೆ ಮನೆಯಿಂದ ಹೊರ ಹೋದವರು ಮರಳಿ ಮನೆಗೆ ಇದುವರೆಗೂ ಬಂದಿಲ್ಲ ಎನ್ನಲಾಗಿದೆ.
ಈ ಸಂಬಂಧ ಪ್ರಿಯದಶರ್ಶಿನಿಯ ತಾಯಿ ಹಾಗೂ ಪತಿ ದಿಲೀಪ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಾದೇವಿಯು ಮಾಟ ಮಂತ್ರ ಮಾಡಿಸಿ ಪ್ರಿಯದರ್ಶಿನಿಯನ್ನು ಕರೆದೊಯ್ದಿದ್ದಾಳೆ ಎಂದು ಪ್ರಿಯದರ್ಶಿನಿ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.