ಮೈಸೂರು: ನಂಜನಗೂಡು ಉಪ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿರುವಂತೆಯೇ ಕ್ಷೇತ್ರದ ಜನರ ಒಲವು ಗಳಿಸಲು ಮುಂದಾಗಿರುವ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಭರ್ಜರಿ ಬಾಟೂಟ ಹಾಕಿಸಿದ್ದಾರೆ.
ಈಗಾಗಲೇ ಉಪ ಚುನಾವಣೆ ಮೇಲೆ ಕಣ್ಣಿಟ್ಟಿರುವ ಸುನೀಲ್ಬೋಸ್, ಕ್ಷೇತ್ರದ ಕಾರ್ಯಕರ್ತರ ಒಲವು ಗಳಿಸಲು ಈಗಿನಿಂದಲೇ ಪ್ರಯತ್ನ ಮುಂದುವರಿಸಿದ್ದಾರೆ. ಹೀಗಾಗಿ ದೀಪಾವಳಿಯ ಕಾರ್ತಿಕ ಮಾಸದಲ್ಲಿಯೂ ಕಾರ್ಯಕರ್ತರಿಗಾಗಿಯೇ ರಾಜ್ಯೋತ್ಸವದ ದಿನದಂದು ಖುದ್ದು ತಾವೇ ನಿಂತ ಸುನೀಲ್ಬೋಸ್, ಬಂದವರನ್ನು ಆತ್ಮೀಯವಾಗಿ ಮಾತನಾಡಿಸಿ ಬಾಟೂಟ ಹಾಕಿಸಿದ್ದು ವಿಶೇಷವಾಗಿತ್ತು. ಮಾಂಸಹಾರ ಸೇವಿಸದವರಿಗೆ ಸಸ್ಯಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು. ನಂಜನಗೂಡಿನ ಸುಮಾರು 5 ಸಾವಿರ ಕಾರ್ಯಕರ್ತರನ್ನು ಈ `ಚುನಾವಣಾ ಔತಣಕೂಟ’ಕ್ಕೆ ಕರೆ ತರಲಾಗಿತ್ತು. ತಂದೆ ಡಾ.ಎಚ್.ಸಿ.ಮಹದೇವಪ್ಪ ಅವರ ಮಾರ್ಗದರ್ಶನದಲ್ಲಿ ಈ ಔತಣಕೂಟ ಏರ್ಪಡಿಸಿರುವ ಸುನೀಲ್ಬೋಸ್, ಉಪ ಚುನಾವಣೆಗೆ ತಮ್ಮ ನಾಯಕತ್ವ ಭದ್ರ ಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಶ್ರೀನಿವಾಸಪ್ರಸಾದ್ ಗೆಗೆ ಸೆಡ್ಡು:
ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ವೇದಿಕೆ ಸಿದ್ದಪಡಿಸಿಕೊಂಡಿರುವ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಸೆಡ್ಡೊಡೆಯಲು ಈ ಔತಣ ಕೂಟ ಏರ್ಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸಮಾವೇಶಕ್ಕೆ ವಿರುದ್ಧವಾಗಿ ನ. 8ರಂದು `ಸ್ವಾಭಿಮಾನಿ ಸಮಾವೇಶ’ ನಡೆಸಲು ಸಿದ್ಧತೆ ನಡೆಸಿರುವ ಪ್ರಸಾದ್ ಅವರು, ಕ್ಷೇತ್ರ ಹಲವು ಸಂಘ, ಸಂಸ್ಥೆಗಳು, ಕಾರ್ಯಕರ್ತರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ. ಇರುವ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯಲು, ಮುಂದೆ ಕಾರ್ಯಕರ್ತರು ಶ್ರೀನಿವಾಸಪ್ರಸಾದ್ ಅವರನ್ನು ಹಿಂಬಾಲಿಸದಿರಲಿ ಎನ್ನುವ ಮುಂದಾಲೋಚನೆಯಿಂದ ಸಮಾವೇಶಕ್ಕೆ ಮುನ್ನವೇ ಈ ಔತಣ ಕೂಟ ಏರ್ಪಡಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಊಟದ ಮೆನು:
ಮಾಂಸಹಾರಿಗಳಿಗೆ ಚಿಕನ್ ಬಿರಿಯಾಗಿ, ಮಟನ್ ಸಾಂಬರ್, ಚಿಕನ್ ಚಾಪ್ಸ್, ಗೀ ರೈಸ್, ಬಿಳಿ ಅನ್ನ, ಕೀರು, ಸಸ್ಯಾರಿಗಳಿಗೆ ಪೂರಿ, ಸಾಗು, ಗೀ ರೈಸ್, ಪಲ್ಯ, ಸ್ಪೀಟ್, ಮೊಸರು ಬಜ್ಜಿಯನ್ನು ಬಡಿಸಲಾಯಿತು.
ಚುನಾವಣೆ ಸ್ಪರ್ಧೆಗೆ ಸಿದ್ಧನಿದೇನೆ:
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಆಗಾಗಿ ನಾನು ನಂಜನಗೂಡು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದನಿದ್ದೇನೆ. ಆದರೆ ಪಕ್ಷದ ವರಿಷ್ಠರು ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸುನೀಲ್ಬೋಸ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ದೇವರಿಗೆ ಹರಕೆ ತೀರಿಸಲು ಕಳೆದ 5 ವರ್ಷದಿಂದಲೂ ಇದೇ ರೀತಿ ಭೋಜನ ಕೂಟ ನಡೆಸಿಕೊಂಡು ಬರುತ್ತಿದ್ದೇನೆ. ಅಲ್ಲದೇ ಇದು ನಂಜನಗೂಡು, ತಿ.ನರಸೀಪುರ ಕ್ಷೇತ್ರದ ಕಾರ್ಯಕರ್ತರಿಗೆ ಮಾತ್ರವಲ್ಲ, ಇಡೀ ಜಿಲ್ಲೆಯ ಕಾರ್ಯಕರ್ತರು ಇದರಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ಇದಕ್ಕೆ ವಿಶೇಷ ಅರ್ಥಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.