ಮೈಸೂರು: ವಾಚ್ ಹಗರಣದಿಂದ ಅವಮಾನಿತರಾಗಿರುವ ಕಾಂಗ್ರೆಸ್ ಪಕ್ಷ ಸಿಎಂ ಔತಣಕೂಟಕ್ಕೆ ಅರ್ಧದಷ್ಟು ಶಾಸಕರು ಸಚಿವರೇ ಗೈರಾಗಿದ್ದಾರೆ. ಸಿಎಂ ಸಿದ್ಧರಾಮಯ್ಯನವರೇ ನಿಮ್ಮ ಬುಡದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ವಾಚ್ ಹಗರಣದಿಂದ ಸಿಎಂ ಸಿದ್ಧರಾಮಯ್ಯ ಹೈಕಮಾಂಡ್ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಪಕ್ಷ ಇಕ್ಕಟ್ಟಿಗೆ ಸಿಲುಕಿರುವುದಾಗಿ ಗೃಹ ಸಚಿವ ಪರಮೇಶ್ವರ್ ಹೈಕಮಾಂಡ್ ಗೆ ವರದಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಸ್ವಪಕ್ಷದಲ್ಲಿ ಏನೂ ನಡೆಯುತ್ತಿದೆ ಎಂಬುದೇ ತಿಳಿಯಲಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಮೊನ್ನೆ ಬೆಂಗಳೂರಿನಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ನಡೆದರೂ ಯಾವುದೇ ಲಾಠಿ ಚಾರ್ಜ್ ಆಗಿಲ್ಲವೆಂದು ವಾದಿಸುವ ನಿಮ್ಮ ಹೇಳಿಕೆಗೆ ನಾಚಿಕೆ ಆಗಬೇಕು. ಹಿಂದಿನ ಸರ್ಕಾರದ ಬಗ್ಗೆ ಬೆಟ್ಟು ಮಾಡುವ ನೀವು ಏನೂ ಮಾಡುತ್ತಿದ್ದೀರಿ ಎಂದು ಮೊದಲು ಹೇಳಿ ವಾಚ್ ಸದನಕ್ಕೆ ಮರಳಿಸುವ ಮೂಲಕ ತಪ್ಪು ಒಪ್ಪಿಕೊಂಡಿದ್ದೀರಿ, ಇಷ್ಟಕ್ಕೆ ಬಿಜೆಪಿ ಸುಮ್ಮನ್ನಾಗುವುದಿಲ್ಲ. ಬಿಜೆಪಿ ವಾಚ್ ವಿಚಾರದಲ್ಲಿ ಮುಂದೆ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.
ಈಗ ಮತ್ತೊಮ್ಮೆ ಔತಣಕೂಟ ಏರ್ಪಡಿಸಿದ್ದೀರಿ ಆದರೆ ನಿಮ್ಮವರೇ ನಿಮಗೆ ಏನೂ ಮಾಡುತ್ತಾರೆ ಎಂಬುದನ್ನು ಕಾದು ನೋಡಿ. ರಾಜ್ಯದಲ್ಲಿ ರೈತರ ಸಾವಿನ ಸಂಖ್ಯೆ ಸಾವಿರ ದಾಟಿದ್ದರೂ ಕೇವಲ 250 ಮಂದಿ ಎಂಬ ವರದಿ ನೀಡಿರುವ ನಿಮಗೆ ಜನರೇ ತಕ್ಕಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿರುವ ನೀವು ರೈತರ ಕ್ಷಮೆಯಾಚಿಸಿ ರೈತರ ಸಮಸ್ಯೆಗಳನ್ನು ನಿವಾರಿಸದಿದ್ದರೆ ತೀವ್ರವಾದ ಹೊರಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.