ಮೈಸೂರು: ವಕೀಲರ ಕಚೇರಿಗೆ ಐದು ಮಂದಿ ಯುವಕರ ಗುಂಪೊಂದು ಬಂದು ವಕೀಲರನ್ನು ಬೆದರಿಸಿ ಪ್ರಮುಖ ಕಡತ ಹಾಗೂ 50 ಸಾವಿರ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ಲಕ್ಷ್ಮಿಪುರಂನ 1 ಕ್ರಾಸ್ ಬಳಿ ನಡೆದಿದೆ.
ಈ ಘಟನೆಯು ಸುಬ್ರಹ್ಮಣ್ಯ ಹಾಗೂ ಸುದರ್ಶನ್ ಅವರ ಕಚೇರಿಯಲ್ಲಿ ನಡೆದಿದ್ದು, ವಕೀಲ ಸುದರ್ಶನ್ ಕಚೇರಿಯಲ್ಲಿ ಒಬ್ಬರೇ ಇರುವಾಗ ರಾತ್ರಿ 9.30ರ ಸುಮಾರಿಗೆ ಐದು ಮಂದಿ ಯುವಕರ ಗುಂಪೊಂದು ಆಗಮಿಸಿ ಸುಬ್ರಹ್ಮಣ್ಯ ಬಗ್ಗೆ ವಿಚಾರಿಸಿದರು. ಅವರು ಬಂದಿಲ್ಲವೆಂದು ಹೇಳಿದಾಗ ಒಬ್ಬ ರಿವಾಲ್ವರ್ ತೆಗೆದು ತೋರಿಸಿ ಸುಮ್ಮನ್ನೇ ಕುಳಿತುಕೊ ಇಲ್ಲದಿದ್ದರೆ ಹುಷಾರ್ ಎಂದು ಬೆದರಿಕೆಯೊಡ್ಡಿದನು. ಗಾಬರಿಗೊಂಡ ಸುದರ್ಶನ್ ಸುಮ್ಮನಾಗಿ ಬಿಟ್ಟರು, ಕಚೇರಿಯಲ್ಲಿದ್ದ ಕಡತ ಹಾಗೂ 50 ಸಾವಿರ ಹಣವನ್ನು ದೋಚಿ ಹೋದರು. ವಕೀಲ ಸುಬ್ರಹ್ಮಣ್ಯ ಲಕ್ಷ್ಮಿಪುರಂ ಠಾಣೆಯ ಪೊಲೀಸರಿಗೆ ತೆರಳಿ ದೂರು ದಾಖಲಿಸಿದ್ದು, ಈ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಶ್ವಾನದಳ, ಬೆರಳುಚ್ಚು ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.