ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಮತದಾನವಾಗಿದೆ. ಹಾಗಾಗಿ ಅಮ್ಮ (ಸುಮಲತಾ ಅಂಬರೀಶ್) ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಪುತ್ರ ಅಭಿಷೇಕ್ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಹಾವೀರ ವೃತ್ತದಲ್ಲಿರುವ ಟೀ ಸ್ಟಾಲ್ಗೆ ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಚಹಾ ಸೇವಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸಾಲಿಗಿಂತ ಈಗ ಹೆಚ್ಚಿನ ಮತದಾನವಾಗಿದೆ. ಹೀಗಾಗಿ ಸುಮಲತಾ ಗೆಲ್ಲುವ ಸಾಧ್ಯತೆಗಳೂ ಹೆಚ್ಚಿವೆ ಎಂದು ಹೇಳಿದರು.
ಜನ ನಮ್ಮ ಕೈ ಹಿಡಿಯುತ್ತಾರೆಂಬ ನಂಬಿಕೆ ಇದೆ. ಲೀಡಿಂಗ್ ಎಂಬ ಮಾತು ಬೇಡ. ಅದು ಅಹಂಕಾರದ ಮಾತಾಗುತ್ತದೆ. ಜನ ನಮ್ಮ ಕೈಹಿಡಿದು ಆಶೀರ್ವಾದ ಮಾಡಿದರೆ ಅಷ್ಟೇ ಸಾಕು. ಕೊನೆವರೆಗೂ ನಮ್ಮ ಮತ್ತು ಮಂಡ್ಯ ಸಂಬಂಧ ಚೆನ್ನಾಗಿಯೇ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾರೂ ಸಹ ಬೆಟ್ಟಿಂಗ್ ಕಟ್ಟಬೇಡಿ, ಬೆಟ್ಟಿಂಗ್ ಕಟ್ಟಿ ಹಣ ಹಾಳು ಮಾಡಿಕೊಳ್ಳಬೇಡಿ ಎಂದು ಇದೇ ವೇಳೆ ಜಿಲ್ಲೆಯ ಮತದಾರರು, ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು.
ಚುನಾವಣೆ ಸಂದರ್ಭದಲ್ಲಿ ಟೀ ಅಂಗಡಿಯವರಿಗೆ ಮಾತು ಕೊಟ್ಟಿದ್ದೆ. ಚುನಾವಣೆ ಮುಗಿದ ಮೇಲೆ ಟೀ ಕುಡಿಯಲು ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಚುನಾವಣೆ ಮುಗಿದಿದೆ. ಈಗ ಸ್ವಲ್ಪ ಆರಾಮವೆನಿಸಿದೆ. ಮಾತು ಕೊಟ್ಟಂತೆ ನಾನು ಇಲ್ಲಿಗೆ ಬಂದು ಚಹಾ ಕುಡಿಯುತ್ತಿದ್ದೇನೆ ಎಂದು ಎದುರಾಳಿಗಳಿಗೆ ಸಂದೇಶ ರವಾನಿಸಿದರು.
ಚುನಾವಣೆಯಾದ ಬಳಿಕ ಸುಮಲತಾ ಅಂಬರೀಷ್ ಮತ್ತು ನಾನು ಸಿಂಗಾಪುರಕ್ಕೆ ಹೋಗುತ್ತಾರೆಂಬ ಮಾತುಗಳು ಕೇಳಿಬಂದಿದ್ದವು. ನಾವು ಈಗ ಮಂಡ್ಯದಲ್ಲಿಯೇ ಇದ್ದೀವಿ. ಟೀ ಕುಡಿಯಲು ಮಹಾವೀರ ವೃತ್ತದ ಬಳಿ ಬಂದಿದ್ದೀನಿ. ಯಾರಿಗಾದರೂ ಸಂದೇಹವಿದ್ದರೆ ಬಂದು ನೋಡಿಕೊಂಡು ಹೋಗಿ, ನಾವಿನ್ನೂ ಮಂಡ್ಯದಲ್ಲಿಯೇ ಇರುವುದಿಲ್ಲವೆಂದು ಟೀಕೆ ಮಾಡಿದವರಿಗೆ ತಿರುಗೇಟು ನೀಡಿದರು.