ಮೈಸೂರು: ಜೂ.19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಶಿಫಾರಸ್ಸು ಮಾಡಿರುವುದಾಗಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೊರೋನಾವನ್ನು ನಿಭಾಯಿಸುವಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿದೆ. ಬದ್ಧತೆ ಇಲ್ಲದ ಸರ್ಕಾರ ರಾಜ್ಯದಲ್ಲಿದ್ದು, ಕೇರಳದಲ್ಲಿ ಮೊದಲ ಪ್ರಕರಣ ಬಂದಾಗಲೇ ಎಚ್ಚೆತ್ತುಕೊಂಡಿದ್ದರೆ ಈ ಮಟ್ಟಕ್ಕೆ ಸೋಂಕು ಹೋಗುತ್ತಿರಲಿಲ್ಲ. ಮಧ್ಯರಾತ್ರಿಯೇ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಜನರಿಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಗಲಿಲ್ಲ. ಇದರಿಂದ ಕಾರ್ಮಿಕರು, ಬಡವರ್ಗದವರು ತೊಂದರೆ ಅನುಭವಿಸುವಂತಾಯಿತು.
ಈಗ ಶಾಲೆಗಳನ್ನು ತೆರೆಯುವ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸರ್ಕಾರ ಈ ವಿಚಾರದಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಇದರಿಂದ ಭಾರಿ ಅನಾಹುತಗಳಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಶಾಲೆ ಆರಂಭಿಸಿದರೆ ಎರಡು ಶಿಫ್ಟ್ ಮಾಡಿ ಶಾಲೆ ಪ್ರಾರಂಭ ಮಾಡಬೇಕು. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ಶಾಲೆ ನಡೆಸಬೇಕು. ಕೋವಿಡ್-19 ಉಪಟಳ ಮಕ್ಕಳಿಗೆ ತಗುಲಿದರೆ ಅದರ ಪರಿಣಾಮಗಳು ಜಾಸ್ತಿ. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೂ ನಾನು ಕೆಲವು ಸಲಹೆಗಳನ್ನು ನೀಡಿರುವುದಾಗಿ ಹೇಳಿದರು.
ಒಂದು ವೇಳೆ ಮಕ್ಕಳಿಗೆ ಕೊರೋನಾ ಏನಾದರೂ ತಗುಲಿದರೆ ಇಡೀ ಕುಟುಂಬಕ್ಕೆ ಹರಡುತ್ತೆ. ಸರ್ಕಾರ ಪೂರ್ವ ಸಿದ್ದತೆ ಮಾಡಿಕೊಂಡು ಶಾಲೆ ತೆರೆಯಬೇಕು. ಮಾಸ್ಕ್ ಹಾಕೋಳೋದು, ಸ್ಯಾನಿಟೈಸ್ ಮಾಡಿಕೊಳ್ಳೊದು ಮುಖ್ಯವಾಗಿದ್ದು, ಸೋಂಕು ತಹಬದಿಗೆ ಬರೋತನಕ ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ ಎಂದರು.
ಒಂದು ವೇಳೆ ನಾನೇನಾದರೂ ಸಿಎಂ ಆಗಿದ್ದರೆ ಕುಟುಂಬಕ್ಕೆ 10 ಸಾವಿರ ಕೊಡುತ್ತಿದ್ದೆ. ಬರೋಬ್ಬರಿ 1ಕೋಟಿ ಜನರಿಗೆ 10ಸಾವಿರ ಕೊಡ್ತಿದ್ದೆ ಈ ಬಗ್ಗೆ ಯಡಿಯೂರಪ್ಪ ಯೋಚಿಸಲಿ ಎಂದರು.