ಮಂಗಳೂರು: ಪಾಕಶಾಸ್ತ್ರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನ ಚಾಣಕ್ಯರು ಎಂದು ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಹೇಳಿದರು.
ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಹಯೋಗದಲ್ಲಿ ಬುಧವಾರ ಕೈರುಚಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಆಹಾರ ಪದ್ಧತಿ ಪ್ರಪಂಚದ ಎಲ್ಲ ಆಹಾರ ಪದ್ಧತಿಗಿಂತ ಶ್ರೇಷ್ಠ ಎಂದು ಶ್ಲಾಘಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕೋಶಾಧಿಕಾರಿ, ಗುರುಬೆಳದಿಂಗಳು ಸೇವಾ ಸಂಸ್ಥೆ ಅಧ್ಯಕ್ಷ ಪದ್ಮರಾಜ್ ಆರ್. ಅಧ್ಯಕ್ಷತೆ ವಹಿಸಿ, ತಿನ್ನುವ ಆಹಾರ ದೇವರ ಸಮಾನ. ಈ ಒಂದು ಹೊತ್ತಿನ ಅನ್ನಕ್ಕಾಗಿ ಪರಿತಪಿಸುವ ಅದೆಷ್ಟೋ ಜೀವಗಳು ಇವೆ. ಆದ್ದರಿಂದ ನಾವು ಊಟ ಮಾಡುವ ಒಂದು ಅಗುಳು ಆಹಾರವೂ ಹಾಳು ಮಾಡಬಾರದು ಎಂದರು.
ಕೈರುಚಿ ಸ್ಪರ್ಧೆಯಲ್ಲಿ ಅಕಾಂಕ್ಷಾ ಅಮೀನ್ ಪ್ರಥಮ, ಅಂಜನಾ ರಾಯ್ಕರ್ ದ್ವಿತೀಯ ಮತ್ತು ಜೀವಿತಾ ಯತೀಶ್ ಕರ್ಕೇರಾ ತೃತೀಯ ಸ್ಥಾನ ಪಡೆದರು.
ಈ ಸಂದರ್ಭ ಅಶಕ್ತರಿಗೆ ಸಹಾಯಧನ, ಪ್ರತಿಭಾವಂತರಿಗೆ ಗೌರವಾರ್ಪಣೆ ನಡೆಯಿತು. ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಗೆ ವಿಶ್ವ ಬಿಲ್ಲವ ಸೇವಾ ಚಾವಡಿ ವತಿಯಿಂದ ಧನಸಹಾಯ ವಿತರಿಸಲಾಯಿತು. ಸಮಾಜಸೇವಕಿ ಗೀತಾಂಜಲಿ ಸುವರ್ಣ, ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್, ಸ್ಫೂರ್ತಿ ವಿಶೇಷ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಸಂಸ್ಥಾಪಕ ಚಂದ್ರಶೇಖರ ಬಂಟ್ವಾಳ ಮೊದಲಾದವರಿದ್ದರು.
ಕುಸುಮಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶ್ರೀ ಜೆ. ಪೂಜಾರಿ ಮತ್ತು ದಿವ್ಯಶ್ರೀ ಪೂಜಾರಿ ಕಕ್ಕೆಪದವು ಕಾರ್ಯಕ್ರಮ ನಿರ್ವಹಿಸಿದರು. ದಿನೇಶ್ ಸುವರ್ಣ ರಾಯಿ ಬಹುಮಾನಿತರ ಪಟ್ಟಿ ವಾಚಿಸಿದರು. ಅಜಿತ್ ಪೂಜಾರಿ ಗ್ರಾಮಚಾವಡಿ ವಂದಿಸಿದರು.