ಮೈಸೂರು: ಮೈಸೂರು ದಸರಾಕ್ಕೆ ಬರುವ ಪ್ರವಾಸಿಗರು ಇಲ್ಲಿನ ಅರಮನೆ ಆವರಣದಲ್ಲಿರುವ ಹುಲಿಗಳ ಜತೆ ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಯಾರಾದರೂ ನೋಡಿದರೆ ತಕ್ಷಣಕ್ಕೆ ಅವುಗಳತ್ತ ಅಚ್ಚರಿಯ ನೋಟ ಬೀರುತ್ತಾರೆ. ಇಷ್ಟಕ್ಕೂ ಇದ್ಯಾವುದಪ್ಪಾ ನಾವು ನೋಡದ ಹುಲಿಗಳು ಎಂದು ಅಚ್ಚರಿಪಡುತ್ತಿದ್ದೀರಾ?
ಅಚ್ಚರಿ ಪಡಲೇ ಬೇಕು ಇಲ್ಲಿರುವ ಹುಲಿಗಳ್ಯಾವುದೂ ಪಕ್ಕದಲ್ಲಿ ನಿಂತರೆ, ಮುಟ್ಟಿದರೆ, ಅದರ ಮೇಲೆ ಹತ್ತಿದರೂ ಏನೂ ಮಾಡುವುದಿಲ್ಲ. ಏಕೆಂದರೆ ಇವುಗಳು ಜೀವಂತವಲ್ಲ ಕಂಚಿನ ಹುಲಿಗಳು. ಇಷ್ಟಕ್ಕೂ ಈ ಕಂಚಿನ ಹುಲಿಗಳನ್ನು ಇಲ್ಲಿ ಏಕೆ ನಿರ್ಮಿಸಿದ್ದಾರೆ ಎಂಬುದರ ಬಗ್ಗೆ ತಿಳಿಯುತ್ತಾ ಹೋದರೆ ಅದರ ಹಿಂದಿನ ರೋಚಕ ಇತಿಹಾಸ ತೆರೆಯುತ್ತಾ ಹೋಗುತ್ತದೆ.
ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಅರಮನೆಯ ಹೊರ ಆವರಣದಲ್ಲಿ ಆಗಾಗ ಹುಲಿಗಳು ಕಾಣಿಸಿಕೊಳ್ಳುತ್ತಿದ್ದು, ಅವು ಯಾರಿಗೂ ತೊಂದರೆ ನೀಡುತ್ತಿರಲಿಲ್ಲ. ಸೌಮ್ಯತೆಯಿಂದ ವರ್ತಿಸುತ್ತಿದ್ದ ಹುಲಿಗಳನ್ನು ನೋಡಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಖುಷಿಪಡುತ್ತಾ ದಿನ ಕಳೆಯುತ್ತಿದ್ದರು. ಆದರೆ ಕೆಲವು ವರ್ಷಗಳ ನಂತರ ಹುಲಿಗಳು ಬರುವುದನ್ನು ನಿಲ್ಲಿಸಿ ಬಿಟ್ಟವು. ಇದು ಅವರಿಗೆ ಅತೀವ ವೇದನೆಯನ್ನುಂಟು ಮಾಡಿತು. ಮುಂದೆ ಈ ವಿಚಾರವನ್ನು ಅವರು ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಹೇಳಿದ್ದರು. ಇದನ್ನು ಕೇಳಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಅರಮನೆ ಆವರಣದಲ್ಲಿ ಹುಲಿಗಳು ಅಡ್ಡಾಡುತ್ತಿದ್ದ ನೆನಪಿಗಾಗಿ ಪ್ರತಿಮೆಗಳನ್ನು ನಿರ್ಮಿಸುವ ತೀರ್ಮಾನ ಮಾಡಿದರು. ಆದರೆ ಹುಲಿಗಳ ಪ್ರತಿಮೆ ಮಾಡುವವರು ಬೇಕಲ್ಲವೆ ಇದಕ್ಕಾಗಿ ಹುಡುಕಾಡುತ್ತಿದ್ದರು.
ಇದೇ ವೇಳೆ ಅರಮನೆ ವೀಕ್ಷಣೆಗೆ ಬಂದಿದ್ದ ಪ್ರಖ್ಯಾತ ಶಿಲ್ಪ ತಜ್ಞ ಬ್ರಿಟನ್ನ ರಾಯಲ್ ಅಕಾಡೆಮಿಯ ರಾಬರ್ಡ್ ವಿಲಿಯಂ ಕಾಲ್ಟನ್ ಅವರೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತನಾಡುತ್ತಾ, ತಮ್ಮ ಮನದ ಇಂಗಿತವನ್ನು ಅವರಿಗೆ ತಿಳಿಸಿದರು. ಆಗ ರಾಬರ್ಡ್ ವಿಲಿಯಂ ಕಾಲ್ಟನ್ ಅವರು ಮೂರು ತಿಂಗಳ ಅವಧಿಯೊಳಗೆ ಹುಲಿಗಳ ಪ್ರತಿಮೆಯನ್ನು ಮಾಡಿಕೊಡಲು ಒಪ್ಪಿ, 1909ರ ಅವಧಿಯಲ್ಲಿ ಅರಮನೆಯ ತೊಟ್ಟಿಯ ಭಾಗದ ನಾಲ್ಕು ಕಡೆ ಕಂಚಿನ ಹುಲಿ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಯಿತು.
ಬಳಿಕ ಕಂಚಿನ ಹುಲಿಗಳನ್ನು ಅರಮನೆಯ ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕು ಅಲ್ಲದೆ, ಜಯಮಾರ್ತಂಡ, ವರಾಹ, ಜಯರಾಮ ಮತ್ತು ಬಲರಾಮ ದ್ವಾರಕ್ಕೆ ಎದುರಾಗಿ ಹಾಗೂ ಕಲ್ಯಾಣ ಮಂಟಪ ಹತ್ತಿರವಿರುವ ತೆರೆದ ತೊಟ್ಟಿಯ ಭಾಗ(ಜಟ್ಟಿ ಕಾಳಗ ಸ್ಥಳ)ದಲ್ಲಿ ಹೀಗೆ ಒಟ್ಟು ಎಂಟು ಕಡೆ ನಿರ್ಮಿಸಿದರು.
ಈ ಹುಲಿಗಳು ಅರಮನೆ ಆವರಣದಲ್ಲಿ ಮಾಮೂಲಿಯಾಗಿ ಓಡಾಡುವವರಿಗೆ ವಿಶೇಷವಾಗಿ ಕಾಣದಿದ್ದರೂ ದೂರದಿಂದ ಬರುವ ಪ್ರವಾಸಿಗರಿಗೆ ಅಚ್ಚರಿ ಮೂಡಿಸುತ್ತವೆ. ಅದರಲ್ಲೂ ದಸರಾ ಸಂದರ್ಭದಲ್ಲಂತೂ ಈ ಹುಲಿಗಳ ಪಕ್ಕ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುವುದನ್ನು ಕಾಣಬಹುದಾಗಿದೆ.