ಮೈಸೂರು: ಯೋಗ ದಿನಾಚರಣೆ ಹಿನ್ನಲೆಯಲ್ಲಿ ಪೂರ್ವಭಾವಿಯಾಗಿ ಕಳೆದ ಮೂರು ವಾರಗಳಿಂದ ಪ್ರತಿ ಭಾನುವಾರ ಯೋಗ ನಡೆಯುತ್ತಿದ್ದು, ಇವತ್ತು(ಭಾನುವಾರ) ಅರಮನೆ ಆವರಣದಲ್ಲಿ ನಡೆಯಿತು.
ಈ ಬಾರಿ ಜೂನ್ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ದಿನದಂದು ಮೈಸೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಸರ್ವ ಸಿದ್ಧತೆಗಳ ನಡುವೆಯೂ ಯೋಗ ತಾಲೀಮು ಸಮಾರೋಪಾದಿಯಲ್ಲಿ ಸಾಗುತ್ತಿದೆ.
ನಗರದ ಅರಮನೆ ಆವರಣದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶಾಸಕರಾದ ರಾಮದಾಸ್, ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರಾ, ಯೋಗ ಫೆಡರೇಷನ್ ನ ಮುಖ್ಯಸ್ಥರು ಭಾಗವಹಿಸಿದ್ದ ತಾಲೀಮಿಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವುದರಿಂದ ಜೂನ್ 5 ಮತ್ತು 12ರಂದು ಯೋಗ ತಾಲೀಮು ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇನ್ನು ಯೋಗ ಕಾರ್ಯಕ್ರಮಕ್ಕೆ ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬುದರ ಬಗ್ಗೆ ಜೂ.12ರ ಬಳಿಕ ನಿರ್ಧರಿಸಲಾಗುವುದು ಎಂದು ಹೇಳಿದರು.
ಇನ್ನು ಪ್ರಧಾನಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಪೂರ್ವಸಿದ್ಧತೆ ಪರಿಶೀಲಿಸಲು ಮುಖ್ಯಮಂತ್ರಿಗಳು ಜೂನ್ 8ಕ್ಕೆ ಮೈಸೂರಿಗೆ ಆಗಮಿಸುತ್ತಿದ್ದು ಈ ವೇಳೆ ಕಾರ್ಯಕ್ರಮ ಕುರಿತಂತೆ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುವುದಾಗಿ ಅವರು ತಿಳಿಸಿದರು.
ಯೋಗ ಕಾರ್ಯಕ್ರಮಕ್ಕೆ ಸರ್ಕಾರಿ, ಖಾಸಗಿ, ವಿಶೇಷಚೇತನರು ಸೇರಿದಂತೆ ಯೋಗ ಮಾಡುವ ಎಲ್ಲರಿಗೂ ಅವಕಾಶ ನೀಡಲಾಗುವುದು. ನೋಂದಣಿ ಸಂಬಂಧ ನಿರ್ದೇಶಕರನ್ನು ನೇಮಿಸಲಾಗಿದೆ.
ರಾಜ್ಯ ಸರ್ಕಾರದಿಂದ 12 ಸಾವಿರ, ಕೇಂದ್ರ ಸರ್ಕಾರದಿಂದ ಮೂರು ಸಾವಿರ ಸೇರಿ ಒಟ್ಟು 15 ಸಾವಿರ ನೋಂದಣಿ ಆಗುವ ಅಂದಾಜಿದೆ ಎಂದು ಅವರು ತಿಳಿಸಿದರು.