ಮೈಸೂರು: ಖ್ಯಾತ ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ `ಪರ್ವ’ ನಾಟಕ ಪ್ರದರ್ಶನ ಸೆ.4 ರಿಂದ ಮತ್ತೆ ಪ್ರಾರಂಭವಾಗಲಿದೆ.
ಡಾ.ಎಸ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯನ್ನು ಮಹಾ ರಂಗಪ್ರಯೋಗವಾಗಿ ಪ್ರಕಾಶ್ ಬೆಳವಾಡಿ ರಂಗರೂಪಗೊಳಿಸಿ, ನಿರ್ದೇಶಿಸಿದ್ದಾರೆ. `ಪರ್ವ’ ಮಹಾ ರಂಗಪ್ರಯೋಗದ ಯಶಸ್ವಿ ಪ್ರದರ್ಶನ ನೀಡಿ, ದೇಶದಾದ್ಯಂತ ದೊಡ್ಡ ಗಮನ ಸೆಳೆದಿತ್ತು. ಆದರೆ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಕಾರಣದಿಂದ ಇದರ ಪ್ರದರ್ಶನ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ 7 ಪ್ರದರ್ಶನಗಳು ಮಾತ್ರ ಆಗಿತ್ತು.
ಇದೀಗ ನಿರಂತರ ತಾಲೀಮಿನ ನಂತರ ಸೆಪ್ಟಂಬರ್ 4 ಮತ್ತು 05 ರಂದು ಮತ್ತೆ ಪರ್ವ ನಾಟಕ ಪ್ರದರ್ಶನಗೊಳ್ಳಲಿದೆ. ಇನ್ನು ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10 ಗಂಟೆಗೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ. ಮುಂಗಡ ಟಿಕೆಟ್ಗಳನ್ನು ರಂಗಾಯಣದ `ಪರ್ವ’ ಕುಟೀರದಲ್ಲಿ ಕಾಯ್ದಿರಿಸಬಹುದಾಗಿದೆ ಮತ್ತು ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು ಇಡೀ ಪ್ರದರ್ಶನವನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.
ಎಂದಿನoತೆ ನಾಟಕದಲ್ಲಿ 4 ವಿರಾಮಗಳಿದ್ದು, ಈ ವಿರಾಮಗಳಲ್ಲಿ ಪ್ರೇಕ್ಷಕರಿಗೆ ಉಪಹಾರ ಮತ್ತು ಚಹಾ ಮತ್ತು ಮಧ್ಯಾಹ್ನದ ಲಘು ಉಪಹಾರದ ವ್ಯವಸ್ಥೆಯ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ದರ ರೂ.250 ಗಳಾಗಿದ್ದು, ಕೋವಿಡ್-19ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ರಂಗಾಯಣದ ನಿರ್ದೇಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ