ಮೈಸೂರು: ಜಿಲ್ಲೆಯ ಕೆಲವೆಡೆ ಶುಕ್ರವಾರ ಮಳೆಯಾಗಿದೆ. ಮೈಸೂರು ನಗರದಲ್ಲಿ ಮೋಡ ಕವಿದ ವಾತಾವರಣ ಇದೆಯಾದರೂ ಹೆಚ್.ಡಿ.ಕೋಟೆ ವ್ಯಾಪ್ತಿಯ ಸಾಗರೆ ವ್ಯಾಪ್ತಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು ವಾತಾವರಣ ತಂಪಾಗಿದೆ.
ಈಗಾಗಲೇ ಮಳೆಯಿಲ್ಲದೆ ಈ ವ್ಯಾಪ್ತಿಯ ಜನರು ಬಿಸಿಲಿನಿಂದ ಬಸವಳಿದಿದ್ದರು. ಆದರೆ ಇದೀಗ ಮಳೆ ಸುರಿದು ಜತೆಗೆ ನೀರಿಲ್ಲದೆ ಒಣಗಿದ್ದ ಭೂಮಿಯೂ ತೇವವಾಗಿದೆ.
ಗುರುವಾರ ಜಿಲ್ಲೆಯ ಕೆಲವೆಡೆ ಮಳೆ ಬಂದಿತ್ತು. ಇಂದು ಮತ್ತೆ ಮಳೆ ಸುರಿದಿರುವುದು ಎಲ್ಲರಿಗೂ ಹರ್ಷ ತಂದಿದೆ. ಈಗಾಗಲೇ ಬಿಸಿಲಿನಿಂದಾಗಿ ಹುಲ್ಲು ಒಣಗಿ ಜಾನುವಾರುಗಳಿಗೆ ಮೇವಿನ ಕೊರತೆಯುಂಟಾಗಿತ್ತು. ಈಗ ಮಳೆ ಬಂದಿರುವುದರಿಂದ ಹಸಿರು ಮೇವಿಗೆ ಅನುಕೂಲವಾಗಿದೆ.
ಬೇಸಿಗೆ ದಿನಗಳಲ್ಲಿ ಮಳೆ ಬರುತ್ತಿತ್ತಾದರೂ ಈ ಬಾರಿ ಯುಗಾದಿಗೆ ಮೊದಲೇ ಮಳೆ ಬಂದಿರುವುದು ರೈತರು ಸೇರಿದಂತೆ ಜನರಲ್ಲಿ ಸಂತಸ ತಂದಿದೆ.