ಮೈಸೂರು: ರಸ್ತೆಯಲ್ಲಿ ಹೋಗುತ್ತಿದ್ದ ವಾಹನಕ್ಕೆ ಸಿನಿಮೀಯಾ ಶೈಲಿಯಲ್ಲಿ ಡಿಕ್ಕಿ ಹೊಡೆದು ಜಗಳ ತೆಗೆದು ನೀವೇ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿದ್ದೀರಾ ಎಂದು ಜಗಳವಾಡಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಸಾರ್ವಜನಿಕರೊಬ್ಬರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕುವೆಂಪು ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ
ಅಕ್ಟೋಬರ್ 27ರಂದು ನಗರದ ಎನ್. ಆರ್. ಮೊಹಲ್ಲಾದಲ್ಲಿ ಶ್ರೀನಿವಾಸ ಎಂಬುವವರು ತಮ್ಮ ಕಾರಿನಲ್ಲಿ ಕೆಲಸದ ನಿಮಿತ್ತ ಹೋಗುತ್ತಿರುವಾಗ ಜಮೀಲ್, ಜಮೀರ್ ಎಂಬುವವರು ಸಿನಿಮೀಯಾ ಶೈಲಿಯಲ್ಲಿ ಕಾರಿಗೆ ಅಫಘಾತ ಮಾಡಿದ್ದಾರೆ. ತಕ್ಷಣ ಬಂದು ಇಂಡಿಕೇಟರ್ ಹಾಕದೇ ಬಂದಿದ್ದಕ್ಕೆ ಈ ರೀತಿಯಾಗಿದೆ ಎಂದು ಜಗಳ ತೆಗೆದಿದ್ದಾರೆ. ಇದರಿಂದ ಗಾಬರಿಯಾದ ಶ್ರೀನಿವಾಸ್ ಏನೂ ಗೊತ್ತಾಗದೆ ಒಂದು ಕ್ಷಣ ಗಾಬರಿಯಾಗಿದ್ದಾರೆ. ನಿಮ್ಮ ಕಾರು ನಮ್ಮ ಹುಡುಗನಿಗೆ ಡಿಕ್ಕಿ ಹೊಡೆದಿದ್ದು, ಚಿಕಿತ್ಸೆ ಕೊಡಿಸಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನೊಳಗೆ ಕುಳಿತ್ತಿದ್ದಾರೆ. ತಕ್ಷಣ ಶ್ರೀನಿವಾಸ್ ಹಾಗಾದರೇ ಚಿಕಿತ್ಸೆ ಕೊಡಿಸುತ್ತೇನೆ ಬನ್ನಿ ಎಂದು ಸ್ವಲ್ಪ ದೂರು ಕರೆದುಕೊಂಡು ಹೋಗುತ್ತಿದ್ದಂತೆ ಕಾರಿನಲ್ಲಿದ್ದ ಯುವಕ ಸಾರ್ ಅವನು ಸರಿಯಿಲ್ಲ, ಸ್ವಲ್ಪ ಹಣ ಕೊಟ್ಟು ಕಳುಹಿಸಿಬಿಡಿ ಎಂದಿದ್ದಾನೆ.
ಕೊನೆಗೆ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಆಗ ಶ್ರೀನಿವಾಸ್ ನನ್ನ ಬಳಿ ಹಣ ಇಲ್ಲ. ಎಟಿಎಂ ಹೋಗಿ ಕೊಡುತ್ತೇನೆಂದು ಹೇಳಿ ಎಟಿಎಂ ಬಳಿ ಕರೆದುಕೊಂಡು ಹೋಗಿದ್ದಾನೆ. ಎಟಿಎಂ ಹತ್ತಿರ ಹೋಗಿ ಹಣ ಡ್ರಾ ಮಾಡಿಕೊಂಡು ಬರುತ್ತೇನೆಂದು ಎಟಿಎಂ ಬಳಿ ಪರಿಚಯಸ್ಥರಿಗೆ ಫೋನ್ ಮೂಲಕ ನಡೆದಿದ್ದ ವಿಷಯ ತಿಳಿಸಿದ್ದಾನೆ. ತಕ್ಷಣ ಶ್ರೀನಿವಾಸ್ ಬಳಿ ಬಂದ ಜಮೀಲ್ ಯಾರೊಂದಿಗೆ ಮಾತನಾಡುತ್ತಿದ್ದೀರಾ ನಮಗೆ ಹಣ ಕೊಡುವುದಿಲ್ಲವೇ ಎಂದು ಜಗಳ ತೆಗೆದಿದ್ದಾರೆ. ಅದಕ್ಕೆ ಶ್ರೀನಿವಾಸ್ ನಮ್ಮ ಸ್ನೇಹಿತು ಬರುತ್ತಾರೆ. ಅವರ ಸಮ್ಮುಖದಲ್ಲಿ ಹಣ ನೀಡುತ್ತೇನೆ ಎಂದ ತಕ್ಷಣ ಎಚ್ಚೆತ್ತ ದುಷ್ಕರ್ಮಿಗಳು ಶ್ರೀನಿವಾಸ್ ಅವರನ್ನು ನಿಂದಿಸುತ್ತಾ ಅಲ್ಲಿಂದ ಪರಾರಿಯಾಗಿದ್ದಾರೆ. ಅವರ ಫೋಟೋಗಳನ್ನು ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ಶ್ರೀನಿವಾಸ್ ವಾಟ್ಸ್ ಆಪ್ ನಲ್ಲಿ ತಮ್ಮ ಸ್ನೇಹಿತರ ಗ್ರೂಪ್ ಗಳಿಗೆ ಕಳುಹಿಸಿ ಎಚ್ಚರಿಕೆಯಿಂದರುವಂತೆ ತಿಳಿಸಿದ್ದಾರೆ.
ಮತ್ತೆ ಪ್ರತ್ಯಕ್ಷರಾದ ದುಷ್ಕರ್ಮಿಗಳು
ಕುವೆಂಪು ನಗರದ ನಿವಾಸಿ ವಿಶ್ವನಾಥ್ ಪ್ರಧಾನ್ ಎಂಬವರ ಕಾರನ್ನು ಅದೇ ಬಡಾವಣೆಯ ವಿಜಯ ಬ್ಯಾಂಕ್ ವೃತ್ತದ ಬಳಿ ನಿಲ್ಲಿಸಿದ ಇದೇ ದುಷ್ಕರ್ಮಿಗಳು ಮತ್ತದೇ ಬಗೆಯ ಅಫಘಾತ ನಾಟಕ ಆಡತೊಡಗಿದ್ದಾರೆ. ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದ ಶ್ರೀನಿವಾಸ್ ಈ ಇಬ್ಬರೂ ದುಷ್ಕರ್ಮಿಗಳನ್ನು ಗುರುತಿಸಿ ತಕ್ಷಣ ಕಾರು ನಿಲ್ಲಿಸಿ ಕಳ್ಳರು ಎಂದು ಕೂಗಿಕೊಂಡು ಸಾರ್ವಜನಿಕರ ಸಹಾಯದೊಂದಿಗೆ ದುಷ್ಕರ್ಮಿಗಳನ್ನು ಕುವೆಂಪು ನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ ನಂತರ ವಿವಿಪುರಂ, ಜಯಲಕ್ಷ್ಮಿಪುರಂ, ಉದಯಗಿರಿ ಮತ್ತಿತರ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿ ಹಣ ವಸೂಲಿ ಮಾಡುತ್ತಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ಕುವೆಂಪುನಗರ ಪೊಲೀಸರು ವಂಚಕರಾದ ಜಮೀಲ್, ಜಮೀರ್ ನಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.