ಮೈಸೂರು: ಕೊರೊನಾ ಕಾರಣದಿಂದಾಗಿ ಮೈಸೂರಿನತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ದಸರಾಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ದೂರದ ಮೈಸೂರಿನತ್ತ ಮುಖ ಮಾಡುತ್ತಿದ್ದು, ನಗರದಾದ್ಯಂತ ಪ್ರವಾಸಿ ತಾಣಗಳಲ್ಲಿ ಜನ ಸಂದಣಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ನಗರಕ್ಕೆ ದಸರಾ ಕಳೆ ಬಂದಂತಾಗಿದೆ.
ಮೈಸೂರು ದಸರಾಕ್ಕೆ ಕಳೆಕಟ್ಟಬೇಕಾದರೆ ಪ್ರವಾಸಿಗರು ಬರಬೇಕು. ವ್ಯಾಪಾರ ವಹಿವಾಟುಗಳು ಚಿಗಿತುಕೊಳ್ಳಬೇಕು. ಆಟೋ, ಟಾಂಗಾ, ಬೀದಿ ಬದಿ ವ್ಯಾಪಾರಿಗಳು ಎಲ್ಲರೂ ಖುಷಿಪಡುತ್ತಾರೆ. ಪ್ರವಾಸೋದ್ಯಮ ಚಿಗುರಿದರೆ ಅದರ ಸುತ್ತ ಎಲ್ಲವೂ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ಜನರು ಖುಷಿಪಡುತ್ತಾರೆ.
ಬಹಳ ಸಮಯದಿಂದ ಮೈಸೂರು ನಗರದಲ್ಲಿ ಪ್ರವಾಸಿಗರೇ ಕಾಣುತ್ತಿರಲಿಲ್ಲ. ಆದರೀಗ ಪ್ರವಾಸಿಗರು ಕಾಣಿಸಿಕೊಳ್ಳುತ್ತಿರುವುದುಕಳೆಗುಂದಿದ್ದ ಪ್ರವಾಸೋದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸೂಚನೆ ನೀಡಿದೆ.
ಹೊರಗಿನಿಂದ ಬರುವ ಪ್ರವಾಸಿಗರು ಹೆಚ್ಚಾಗಿ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಹೀಗಾಗಿ ಈ ಪ್ರವಾಸಿ ತಾಣಗಳಲ್ಲಿ ಜನ ಸಂದಣಿ ಕಾಣಿಸುತ್ತಿದೆ.
ಮೈಸೂರಿನ ಅಂದ ಸವಿಯಲು ವಿಶ್ವದ ಸಾವಿರಾರು ಪ್ರವಾಸಿಗರು ಪ್ರತಿನಿತ್ಯ ಅರಮನೆ ನಗರಿಗೆ ಭೇಟಿ ನೀಡುತ್ತಾರೆ. ಆದರೆ ಕಳದೆ ಒಂದೂವರೆ ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು. ಇದರಿಂದಾಗಿ ಪ್ರವಾಸಿಗರನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳು, ಹೋಟೆಲ್ ಉದ್ಯಮ ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಇದೀಗ ದಸರಾ ಮಹೋತ್ಸವ ಸಮೀಪಿಸುತ್ತಿದ್ದು, ಮೈಸೂರಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಮಂದಿ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಲಾಕ್ಡೌನ್ ಬಳಿಕ ಹೆಚ್ಚು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ.