ಪ್ರಮುಖ ಗ್ರಾಮೀಣ ಬ್ಯಾಂಕಾಗಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು, ಅಟಲ್ ಪಿಂಚಣಿ ಯೋಜನೆಯ (ಏಪಿವೈ) ಅನುಷ್ಠಾನಕ್ಕೆ ಸಂಬಂಧಿಸಿದ 2020-2021 ರ ಅವಧಿಯಲ್ಲಿ ರಾಷ್ರ್ಟದಾಂದ್ಯತ ನಡೆದ ವಿವಿಧ ಅಭಿಯಾನಗಳ ಅಡಿಯಲ್ಲಿ ಮಾಡಿದ ಉತ್ತಮ ಸಾಧನೆಗೆ ಸಂಬಂಧಿಸಿ ಮತ್ತೆ ಎರೆಡು ಉನ್ನತ ಪ್ರಶಸ್ತಿಗಳನ್ನು (“ಏ ಪಿ ವಾಯ್ ಬಿಗ್ ಬಿಲಿವರ್ಸ್ “ ಮತ್ತು “ಲೀಡರ್ಶಿಫ್ ಕೆಪಿಟಲ್” ) ಮುಡಿಗೇರಿಸಿಕೊಂಡಿದೆ. ಸೋಮವಾರದಂದು ಚೆನ್ನೈ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಮ್) ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಾಯ ಪ್ರಶಸ್ತಿ ಫಲಕಗಳನ್ನು ವಿತರಿಸಿದರು.
ಪ್ರಶಸ್ತಿಗಳನ್ನು ಸ್ವೀಕರಿಸಿ ಮಾತನಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ, ಪಿ.ಗೋಪಿ ಕೃಷ್ಣ ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ ವಿಶಾಲ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಹಣಕಾಸು ಸೇವೆಗಳನ್ನು ತಲುಪಿಸಲು ಬ್ಯಾಂಕು ಪರಮಾದ್ಯತೆ ನೀಡಿದೆ. ಅಟಲ್ ಪೆನ್ಶನ್ ಯೋಜನೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ವರದಾನವಾಗಿದ್ದು ನಿರ್ಧಿಷ್ಟಪಡಿಸಿದ ಕಂತನ್ನು ಪಾವತಿಸಿ ೬೧ನೇ ವರ್ಷದಿಂದ ರೂ. 1000/- ದಿಂದ ರೂ.5000/- ಮಿತಿಯಲ್ಲಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಇದರಿಂದ ರೈತರು, ರೈತ ಕಾರ್ಮಿಕರು, ಕಾರ್ಖಾನೆಗಳಲ್ಲಿ ದುಡಿಯುವವರು, ನಿಶ್ಚಿತ ಪಿಂಚಣಿ ಇಲ್ಲದ ಶ್ರಮಿಕರು ತಮ್ಮ 60 ನೇ ವರ್ಷದ ನಂತರ ನಿಶ್ಚಿಂತ ಬದುಕು ಸಾಗಿಸಲು ಅನುಕೂಲವಾಗಲಿದೆ ಎಂದು ಗೋಪಿಕೃಷ್ಣ ಹೇಳಿದರು. ಪ್ರಶಸ್ತಿಗಳನ್ನು ಸ್ವೀಕರಿಸಿದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಅವರು ಪ್ರಶಸ್ತಿ ಬ್ಯಾಂಕಿನ ಗೌರವ ಹೆಚ್ಚಿಸಿದೆ ಎಂದು ಹೇಳಿದರು. ಈ ಯೋಜನೆಗಳ ಅನುಷ್ಠಾನದಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗ ಅತ್ಯಂತ ಸಕ್ರಿಯವಾಗಿ ಪಾಲುಗೊಂಡಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಾಗುವುದು ಎಂದೂ ಹೇಳಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಾಡಿದ್ದೇನು: 2020-2021 ರ ಹಣಕಾಸು ವರ್ಷದಲ್ಲಿ ಬ್ಯಾಂಕು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ 68961 ಜನರನ್ನು ಒಳಪಡಿಸಿದೆ. ಪ್ರತಿ ಶಾಖೆಗೆ ನೀಡಿದ ಗುರಿ 60 ಕ್ಕೆ ಪ್ರತಿಯಾಗಿ ಬ್ಯಾಂಕು 108 ಖಾತೆಗಳನ್ನು ಮಾಡಿಸಿದೆ. ಯೋಜನೆಯ ಪ್ರಾರಂಭದಿಂದ ಈ ವರೆಗೆ ಬ್ಯಾಂಕು 230432 ಖಾತೆಗಳನ್ನು ಮಾಡಿಸಿ ರಾಷ್ಟ್ರದ ಗಮನ ಸೆಳೆದಿದೆ.
ಅಟಲ್ ಪೆನ್ಶನ್ ಯೋಜನೆಯ ಅನುಷ್ಠಾನ – ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ಮತ್ತೆ ರಾಷ್ಟ್ರೀಯ ಪುರಸ್ಕಾರ.
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.