ರಾಮನಗರ: ನದಿಯನ್ನು ಬೈಕ್ನಲ್ಲಿ ದಾಟಲು ಹೋದ ಸವಾರರಿಬ್ಬರು ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಸಮೀಪದ ಕೈಲಂಚಾ ಹೋಬಳಿ ಹುಲಿಕೆರೆ ಗ್ರಾಮದ ಬಳಿ ನಡೆದಿದೆ. ಸವಾರರಿಬ್ಬರ ಪೈಕಿ ಒಬ್ಬನ ಶವ ದೊರೆತಿದ್ದು, ಮತ್ತೊಬ್ಬನ ಶವಕ್ಕಾಗಿ ಹುಡುಕಾಟ ನಡೆದಿದೆ.
ರಾಮನಗರದ ಯಾರಬ್ನಗರ ನಿವಾಸಿಗಳಾದ ಜುಲ್ಪಿಕರ್ (20), ಮತಿನ್ (22) ಮೃತಪಟ್ಟವರಾಗಿದ್ದು, ಕೈಲಾಂಚ ಹೋಬಳಿ ಹುಲಿಕೆರೆ ಗ್ರಾಮ ಹಾಗೂ ಕನಕಪುರ ರಸ್ತೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ಅರ್ಕಾವತಿ ನದಿಯಲ್ಲಿ ಈ ಘಟನೆ ನಡೆದಿದೆ.
ಅರ್ಕಾವತಿ ನದಿಯನ್ನು ದಾಟಿ ಹುಲಿಕೆರೆ ಗ್ರಾಮದಿಂದ ಕನಕಪುರ ರಸ್ತೆಗೆ ಜನ ಸಾಗುತ್ತಾರೆ ಅದರಂತೆ ಸೋಮವಾರ 3 ಗಂಟೆ ವೇಳೆಯಲ್ಲಿ ಹುಲಿಕೆರೆ ಗ್ರಾಮಕ್ಕೆ ಬಂದಿದ್ದ ಜುಲ್ಪಿಕರ್ ಮತ್ತು ಮತಿನ್ ಹಿಂತೆರಳುವ ವೇಳೆ ಅರ್ಕಾವತಿ ನದಿಯಲ್ಲಿ ನೀರಿದ್ದರೂ ಅದನ್ನು ಗಮನಿಸದೆ ಸ್ಥಳೀಯರ ಮಾತು ಕೇಳದೆ ನದಿಯಲ್ಲೇ ಬೈಕ್ ಚಲಾಯಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದಿದ್ದು, ನೀರು ಅವರನ್ನು ಎಳೆದೊಯ್ದಿದೆ.
ಈ ವೇಳೆ ಅವರಿಬ್ಬರು ಕೂಗಿಕೊಂಡಿದ್ದಾರೆ. ಇದನ್ನು ಕಣ್ಣಾರೆ ಕಂಡ ಕೆಲವರು ರಕ್ಷಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗದ್ದರಿಂದ ಕೂಡಲೇ ಪೊಲೀಸ್ ಮತ್ತು ಅಗ್ನಿಶಾಮಕದಳಕ್ಕೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ತೆಪ್ಪದ ಸಹಾಯದಿಂದ ಶೋಧ ಕಾರ್ಯ ಆರಂಭಿಸಿದ್ದು, ಸಂಜೆ ವೇಳೆಗೆ ಜುಲ್ಪಿಕರ್ನ ಶವ ದೊರೆತಿದ್ದು, ಮತಿನ್ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ನಿನ್ನೆ ರಾತ್ರಿ ವೇಳೆ ಶೋಧನಾ ಕಾರ್ಯ ಸ್ಥಗಿತಗೊಳಿಸಿ ಇಂದು ಮುಂದುವರೆಸಿದ್ದಾರೆ.
ತಹಸೀಲ್ದಾರ್ ಮಾರುತಿ ಪ್ರಸನ್ನ, ಸರ್ಕಲ್ ಇನ್ಸ್ಸ್ಪೆಕ್ಟರ್ ರಮೇಶ್, ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ದೀಪಕ್, ಕೈಲಾಂಚ ಉಪತಹಸೀಲ್ದಾರ್ ವಿಲಿಯಂ, ರಾಜಸ್ವ ನಿರೀಕ್ಷಕ ಆರ್.ವಿ.ಸ್ವಾಮಿ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.