ಪಾವಗಡ: ಹರಿದು ಹೋಗದೆ ಅಲ್ಲಲ್ಲಿ ನಿಂತಿರುವ ಚರಂಡಿ ನೀರು.. ದುರ್ವಾಸನೆಯಿಂದ ಮೂಗುಮುಚ್ಚಿಕೊಂಡು ನಡೆಯಬೇಕಾದ ದುಸ್ಥಿತಿ. ಇದೆಲ್ಲವೂ ಪಾವಗಡ ತಾಲೂಕಿನ ಬುಡಸನ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಕಂಡು ಬಂದಿದ್ದು ಗ್ರಾಮಸ್ಥರು ಗ್ರಾಪಂ. ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾವಗಡ ತಾಲೂಕಿನ ಬುಡಸನ ಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಶಾಲಾ ಅವರಣಕ್ಕೆ ತಡೆಗೋಡೆ ಇಲ್ಲದ ಪರಿಣಾಮ ಸಮೀಪದಲ್ಲೇ ಚರಂಡಿ ಇದ್ದು, ಇಲ್ಲಿ ಬರುವ ನೀರು ಸುಗಮವಾಗಿ ಮುಂದೆ ಸಾಗದ ಕಾರಣ ಚರಂಡಿಯಲ್ಲಿ ತುಂಬಿ ಅಲ್ಲಲ್ಲಿ ನಿಂತು ದುರ್ನಾತ ಬೀರುತ್ತಿದೆ.
ಗ್ರಾಮದ ಮನೆಗಳಿಂದ ಬರುವ ತ್ಯಾಜ್ಯ ನೀರು ಶಾಲಾ ಸಮೀಪವಿರುವ ಚರಂಡಿ ಮುಖಾಂತರವೇ ಹರಿದು ಹೋಗಬೇಕಾಗಿದೆ. ಆದರೆ ಚರಂಡಿಯಲ್ಲಿ ಮಣ್ಣು ಕಸತುಂಬಿದ್ದು, ಅದರನ್ನು ದುರಸ್ತಿಗೊಳಿಸದ ಕಾರಣದಿಂದಾಗಿ ಮುಂದೆ ನೀರು ಹರಿದು ಹೋಗದೆ ದುರ್ವಾಸನೆ ಬೀರುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಅಷ್ಟೇ ಈ ಚರಂಡಿ ಪಕ್ಕವೇ ಶಾಲೆಯ ಬಿಸಿಯೂಟ ತಯಾರಿಕಾ ಕೊಠಡಿಯಿದ್ದು, ಸಾಂಕ್ರಾಮಿಕ ರೋಗಗಳ ಭಯವೂ ಕಾಡುತ್ತಿದೆ. ಈಗ ಶಾಲೆಗಳಿಗೆ ರಜೆಯಿರುವುದರಿಂದ ಈ ಚರಂಡಿಯನ್ನು ಸ್ವಚ್ಛಗೊಳಿಸಿದ್ದೇ ಆದರೆ ಶಾಲೆ ಪ್ರಾರಂಭವಾಗುವಾಗ ಅನುಕೂಲವಾಗುತ್ತದೆ. ಆದರೆ ಇದನ್ನೆಲ್ಲ ಮಾಡುವವರು ಯಾರು ಎಂಬುದೇ ಪ್ರಶ್ನೆಯಾಗಿ ಉಳಿದಿದೆ.
ಇನ್ನು ಶಾಲೆಯಲ್ಲೊಂದು ನೀರಿನ ತೊಟ್ಟಿಯಿದ್ದು, ಇಲ್ಲಿನ ಬಳಕೆಯ ನೀರು ಕೂಡ ಚರಂಡಿಗೆ ಬಂದು ಸೇರುತ್ತಿದೆ. ಶಾಲೆಗೆ ತಡೆಗೋಡೆ ಇಲ್ಲದ ಕಾರಣ ಬಿಸಿಯೂಟ ಸೇವಿಸುವ ವೇಳೆ ಮಕ್ಕಳು ಅವರಣದಲ್ಲಿ ಆಹಾರ ಸೇವಿಸುವಾಗ ವಾಸನೆಯಲ್ಲೇ ಸೇವಿಸಬೇಕಾದ ದುಸ್ಥಿತಿಯೂ ಎದುರಾಗಿದೆ. ಇನ್ನಾದರೂ ಈ ಭಾಗದ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.