ಚಾಮರಾಜನಗರ: ಮೂರು ದಿನಗಳ ಕಾಲ ವಿಶ್ರಾಂತಿಗೆಂದು ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಡೀಪುರದ ಸೆರಾಯ್ ಜಂಗಲ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಇದೀಗ ಅಲ್ಲಿ ಕುಳಿತುಕೊಂಡೇ ಚುನಾವಣಾ ರಣತಂತ್ರವನ್ನು ಹೆಣೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇವರೊಂದಿಗೆ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಸೇರಿದಂತೆ ಪ್ರಮುಖ ನಾಯಕರು ಮಾತ್ರ ಇದ್ದು, ಉಳಿದಂತೆ ಯಾರನ್ನೂ ರೆಸಾರ್ಟ್ ನತ್ತ ತೆರಳಲು ಅವಕಾಶ ನೀಡಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ಬಲ್ಲ ಮೂಲಗಳ ಪ್ರಕಾರ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ನಾಯಕರೊಂದಿಗೆ ವಿಶೇಷ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.
ಈ ನಡುವೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೆರಳಿದ್ದ ಕೆ.ಆರ್.ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅವರಿಗೂ ಅವಕಾಶ ನೀಡದೆ ಹಿಂದಕ್ಕೆ ಕಳುಹಿಸಿದ್ದಾರೆ. ಸದ್ಯ ಸಿಎಂ ವಾಸ್ತವ್ಯ ಹೂಡಿರುವ ಸೆರಾಯ್ ಜಂಗಲ್ ರೆಸಾರ್ಟ್ ಎಸ್. ಎಂ. ಕೃಷ್ಣ ಅಳಿಯ ಸಿದ್ದಾರ್ಥಗೆ ಸೇರಿದ್ದಾಗಿದೆ. ಪ್ರಕೃತಿ ಮಡಿಲಲ್ಲಿರುವ ಈ ರೆಸಾರ್ಟ್ ನಲ್ಲಿ ತಂಗಿರುವ ಸಿಎಂ ಒಂದಷ್ಟು ವಿಶ್ರಾಂತಿಯೊಂದಿಗೆ ರಾಜಕೀಯ ತಂತ್ರಗಳಿಗೂ ಇಲ್ಲಿಯೇ ಮುನ್ನುಡಿ ಬರೆಯುವ ಸಾಧ್ಯತೆಯಿದೆ.
ಇಲ್ಲಿ ಏನು ನಡೆಯುತ್ತಿದೆ ಎಂಬುದು ಹೊರಗೆ ತಿಳಿಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಸಿಬ್ಬಂದಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ರೆಸಾರ್ಟ್ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಬಹಳಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟದ್ದಂತೂ ನಿಜ.