ಮೈಸೂರು: ಟಾಟಾ ಎಸ್ ಹಾಗೂ ಸ್ಕೂಟರ್ ನಡುವೆ ರಸ್ತೆ ಅಫಘಾತ ಸಂಭವಿಸಿದ್ದು ತಂದೆ ಮಗ ಸಾವನ್ನಪ್ಪಿರುವ ದುರ್ಘಟನೆ ಇಂದು ಬೆಳಗಿನ ಜಾವ ಬನ್ನೂರು ಸಮೀಪದ ಚಾಮನಹಳ್ಳಿ ಬಳಿ ನಡೆದಿದೆ.
ತಾಲ್ಲೂಕಿನ ಬಾಣಸವಾಡಿ ಗ್ರಾಮದ ಸಿದ್ದಶೆಟ್ಟಿ(೬೦), ಹಾಗೂ ಆತನ ಪುತ್ರ ಮಹೇಂದ್ರ (೩೦) ಘಟನೆಯಲ್ಲಿ ಸಾವನ್ನಪ್ಪಿದವರು. ರೈತರಾದ ಇವರು ತಾವು ಬೆಳೆದ ಟೋಮೇಟೋವನ್ನು ಬನ್ನೂರು ಪಟ್ಟಣದ ಎಪಿಎಂಸಿ ಯಾರ್ಡ್ ಗೆ ಮಾರಾಟ ಮಾಡಲು ತಮ್ಮ ಸ್ಕೂಟರ್ ನಲ್ಲಿ ತೆಗೆದುಕೊಂಡು ಬರುತ್ತಿದ್ದ ಸಂದರ್ಭ ಚಾಮನಹಳ್ಳಿ ಬಳಿ ಬನ್ನೂರು ಕಡೆಯಿಂದ ಬಂದ ಟಾಟಾ ಏಸ್ ಡಿಕ್ಕಿ ಹೊಡೆದಿದೆ.
ಹೊಡೆತದ ರಭಸಕ್ಕೆ ಮಹೇಂದ್ರ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಗಂಭೀರ ಗಾಯಗೊಂಡ ಸಿದ್ದಶೆಟ್ಟಿ ಯನ್ನು ಮೈಸೂರಿನ ಕೆ.ಆರ್.ಅಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.